ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಬೆಂಗಳೂರು ದಾವೆ ಸಂಖ್ಯೆ O.S.2708/2024 ದಿನಾಂಕ: 18/04/2024 ರ ಮಧ್ಯಂತರ ಆದೇಶ ನೀಡಿದೆ. ಕೋರ್ಟ್ ಆದೇಶದ ಅನುಸಾರ ಶ್ರೀ ಕಿರಣ್ ತೋಟಂಬೈಲ್, ಶ್ರೀ ಚೇತನ್ ರಾಜ್, ಶ್ರೀ ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮತ್ತು ಶ್ರೀ ದಿನೇಶ್ ಬಾಬೂ ಹಾಗೂ ಅವರ ಉದ್ಯೋಗಿಗಳು, ಏಜೆಂಟರು, ಪಾಲುದಾರರು, ಸಹವರ್ತಿ, ಅಧಿಕಾರಿ, ಪ್ರತಿನಿಧಿ ಮತ್ತು ಅವರ ಪರವಾಗಿ ವರ್ತಿಸುವ ಇತರ ಎಲ್ಲ ವ್ಯಕ್ತಿಗಳ ವಿರುದ್ಧ ಆದೇಶ ನೀಡಿದೆ.
“ಧರ್ಮಭೀರು ನಾಡಪ್ರಭು ಕೆಂಪೇಗೌಡ” ಶೀರ್ಷಿಕೆಯ ಚಲನಚಿತ್ರವನ್ನು ಅಥವಾ ಆ ವಿಷಯವನ್ನು ಹೊಂದಿರುವ ಯಾವುದೇ ಚಲನಚಿತ್ರವನ್ನ ಯಾವುದೇ ರೀತಿಯಲ್ಲಿ ಪ್ರಕಟಿಸುವಂತಿಲ್ಲ. ನಿರ್ಮಾಣ, ಪ್ರಸಾರ, ಸಾರ್ವಜನಿಕರಿಗೆ ಸಂವಹನ, ಪುನರುತ್ಪಾದನೆ, ಧ್ವನಿಮುದ್ರಣ, ವಿತರಣೆ, ಪ್ರಸಾರ, ಜಾಹೀರಾತು, ನಿರ್ದೇಶನ ಸೇರಿದಂತೆ ಇತರೆ ಯಾವುದೇ ರೀತಿಯಲ್ಲಿ ಪ್ರಕಟಿಸುವುದಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಲಾಗಿದೆ.
“ನಾಡಪ್ರಭು ಕೆಂಪೇಗೌಡ” ಶೀರ್ಷಿಕೆಯ ಹಕ್ಕುಸ್ವಾಮ್ಯ ಹೊಂದಿರುವುದು ಈಶ್ವರ ಎಂಟರ್ಟೈನ್ಮೆಂಟ್ ಪ್ರೈವೇಟ್ಲಿಮಿಟೆಡ್. ಇದರ ಪ್ರತಿನಿಧಿಗಳಾದ ಡಾ ಎಂ. ಎನ್. ಶಿವರುದ್ರಪ್ಪ ಮತ್ತು ಶ್ರೀ ರಾಹುಲ್ ಗುಂಡಾಲ, ನಿರ್ದೇಶಕ ಶ್ರೀ ಟಿ.ಎಸ್. ನಾಗಾಭರಣ, ಸಹಲೇಖಕಿ ಶ್ರೀಮತಿ ಪ್ರತಿಭಾ ನಂದಕುಮಾರ್ ನಿರ್ಮಾಪಕರುಗಳಾಗಿದ್ದಾರೆ. ಇವರ “ನಾಡಪ್ರಭು ಕೆಂಪೇಗೌಡ” ಚಿತ್ರದ ಚಿತ್ರಕಥೆಯ ಟ್ರೇಡ್ಮಾರ್ಕ್, ಶೀರ್ಷಿಕೆ, ಬ್ರಾಂಡ್, ಪೂರ್ವಪ್ರತ್ಯಯ ಮತ್ತು ಪ್ರತ್ಯಯ ಸೇರಿಕೆ, ರಿಮೇಕ್, ಅಳವಡಿಕೆ ಕುರಿತ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿ ಯಾವುದೇ ರೀತಿಯಲ್ಲಿ ಪ್ರಸ್ತಾವಿತ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಅಥವಾ ಸಾರ್ವಜನಿಕರಿಗೆ ಸಂವಹನಗಳನ್ನು ಮಾಡದಂತೆ ನ್ಯಾಯಾಲಯ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ.
“ನಾಡಪ್ರಭು ಕೆಂಪೇಗೌಡ” ಕುರಿತಂತೆ ಟಿ.ಎಸ್. ನಾಗಾಭರಣ ಮತ್ತು ನಿರ್ಮಾಪಕ ಡಾ ಎಂ.ಎನ್ ಶಿವರುದ್ರಪ್ಪ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲೂ ದಾವೆ ಹೂಡಿದ್ದಾರೆ.
“ನಾಡಪ್ರಭು ಕೆಂಪೇಗೌಡ” ಶೀರ್ಷಿಕೆಯ ಹಕ್ಕುಸ್ವಾಮ್ಯ ಹೊಂದಿರುವ ಟಿ ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ ಕೆಂಪೇಗೌಡರ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರೀಕರಣದ ಪೂರ್ವಸಿದ್ಧತೆಗಳು ಭರದಿಂದ ಸಾಗಿದೆ.
ಇದನ್ನೂ ಓದಿ : T-20 ವಿಶ್ವಕಪ್ನಲ್ಲಿ 2 ತಂಡಗಳಿಗೆ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ ಪ್ರಾಯೋಜಕತ್ವ..!