ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ದಕ್ಷ ಹಾಗೂ ಖಡಕ್ ಅಧಿಕಾರಿ ಡಿಜಿಪಿ ಕಮಲ್ ಪಂತ್ ಅವರು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಬೆಂಗಳೂರಿನ ಮಡಿವಾಳ ಪರೇಡ್ ಗ್ರೌಂಡ್ನಲ್ಲಿ ಕಮಲ್ ಪಂತ್ ಅವರಿಗೆ ಗೌರವ ವಂದನೆ ಸಲ್ಲಿಸಲಾಗಿದೆ. ರಾಜ್ಯ ಅಗ್ನಿಶಾಮಕ ಇಲಾಖೆ ಡಿಜಿಪಿಯಾಗಿರುವ ಕಮಲ್ ಪಂತ್ ಅವರು ಬೆಂಗಳೂರು ಪೊಲೀಸ್ ಕಮೀಷನರ್ ಆಗಿಯೂ ಸುದೀರ್ಘ ಸೇವೆ ಸಲ್ಲಿಸಿದ್ದು, ಇದೀಗ 34 ವರ್ಷಗಳ ಪೊಲೀಸ್ ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ.
Msc ಪದವೀಧರರಾಗಿರುವ ಕಮಲ್ ಪಂತ್ ಉತ್ತರಾಖಂಡ್ ಪ್ರದೇಶದವರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕ ಕೇಡರ್ನ ಐಪಿಎಸ್ ಸೇವೆ ಆರಂಭಿಸಿದ್ದರು. 1990ರ ಬ್ಯಾಚ್ನ IPS ಅಧಿಕಾರಿಯಾಗಿರುವ ಕಮಲ್ ಪಂತ್ ಅವರು ದಕ್ಷತೆ, ಪ್ರಾಮಾಣಿಕತೆ ಹಾಗೂ ಇಲಾಖೆಯಲ್ಲಿ ಹಲವು ನೂತನ ಸುಧಾರಣೆಗಳ ತಂದಿದ್ದರು. 1994ರಲ್ಲಿ ಶಿವಮೊಗ್ಗದ ಭದ್ರಾವತಿಯಲ್ಲಿ ಎಎಸ್ಪಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು.
ಎಸ್ಪಿ, ಡಿಐಜಿ, ಐಜಿಪಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಮಲ್ ಪಂತ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಸಿಬಿಐ, ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಲೋಕಾಯುಕ್ತದಲ್ಲಿ ಕೆಲಸ ಮಾಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ರಾಷ್ಟ್ರಪತಿ ಹೆಸರಿನ ಜೀವಮಾನ ಪೊಲೀಸ್ ಪದಕ ಸೇರಿ ಇನ್ನಿತರ ಪದಕಗಳು ಹಾಗೂ ಗೌರವಗಳಿಗೆ ಭಾಜನರಾಗಿದ್ದಾರೆ. ಸ್ಟ್ಯಾಂಪ್ ಪೇಪರ್ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಕೊಡಿಸುವಲ್ಲಿ ಪಂತ್ ನೆರವಾಗಿದ್ದರು.
ಇದನ್ನೂ ಓದಿ : ಉಡುಪಿ : ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಗೆದ್ದು ಬರಲಿ – ಸ್ಯಾಂಡ್ ಆರ್ಟ್ ಮೂಲಕ ಶುಭಕೋರಿದ ಫ್ಯಾನ್ಸ್..!