ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಅಂತಿಮ ಆದೇಶ ಇಂದು ಹೊರಬೀಳಲಿದೆ.
ಸರ್ಕಾರದ ಅಭಿಯೋಜಕ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರ ಸುದೀರ್ಘ ವಾದ-ಪ್ರತಿವಾದ ಆಲಿಸಿದ 57ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರು ಇಂದಿಗೆ ಜಾಮೀನು ಅರ್ಜಿ ತೀರ್ಪುನ್ನು ಕಾಯ್ದಿರಿಸಿದ್ದರು.
ಅದೇ ರೀತಿ ಈ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳಾದ ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಅವರ ಜಾಮೀನು ಅರ್ಜಿಯ ವಿಚಾರಣೆ ಸಹ ಪೂರ್ಣಗೊಂಡಿದ್ದು, ಇಂದೇ ಇವರ ಜಾಮೀನು ಅರ್ಜಿಯ ಆದೇಶ ಪ್ರಕಟವಾಗಲಿದೆ.
ದರ್ಶನ್ಗೆ ಜಾಮೀನು ಸಿಗದಿದ್ದರೆ ಮುಂದೇನು? ಸದ್ಯ ಬಳ್ಳಾರಿ ಕಾರಾಗೃಹದಲ್ಲಿರುವ ದರ್ಶನ್ ಅವರು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ನ್ಯಾಯಾಲಯವು ಇಂದು ಜಾಮೀನು ನಿರಾಕರಿಸಿದರೆ ಅವರು ಹೈಕೋರ್ಟ್ನ ಮೊರೆ ಹೋಗುವ ಸಾಧ್ಯತೆಯಿದೆ. ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿಯೇ ದರ್ಶನ್ ದಸರಾ ಹಬ್ಬ : ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಆಗಸ್ಟ್ 29 ರಿಂದ ಬಳ್ಳಾರಿ ಕೇಂದ್ರ ಕಾರಾಗೃಹದ ಹೈಸೆಕ್ಯೂರಿಟಿ ಸೆಲ್ನಲ್ಲಿ ಬಂಧಿಯಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಜೈಲಿನಲ್ಲಿ ಕಾಲ ಕಳೆಯುತ್ತಿರುವ ದರ್ಶನ್ ಅವರ ಪಾಲಿಗೆ ಈ ಬಾರಿ ಹಬ್ಬಗಳ ಆಚರಣೆಯ ಸಡಗರ, ಸಂಭ್ರಮವಿಲ್ಲದಂತಾಗಿತ್ತು. ಪ್ರತಿ ವರ್ಷ ನಾಡ ಹಬ್ಬ ದಸರಾದಲ್ಲಿ ಕುಟುಂಬದೊಂದಿಗೆ ವಿಜೃಂಬಣೆಯಿಂದ ತೊಡಗಿಸಿಕೊಳ್ಳುತ್ತಿದ್ದ ಅವರು ಈ ಬಾರಿ ಕುಟುಂಬದಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಗಣೇಶ ಹಬ್ಬವನ್ನೂ ಅವರು ಜೈಲಿನಲ್ಲೇ ಆಚರಿಸಿದ್ದರು.
ಇದನ್ನೂ ಓದಿ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ಅ.15ರ ಬಳಿಕ ರಾಜ್ಯಕ್ಕೆ ಸೈಕ್ಲೋನ್ ಭೀತಿ.. ಅಧಿಕಾರಿಗಳ ಎಚ್ಚರಿಕೆ..!