ಬೆಳ್ತಂಗಡಿ : ಮನೆಯ ಅಂಗಳದಲ್ಲಿಯೇ ನಿವೃತ್ತ ಶಿಕ್ಷಕರೊಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲುವಿನಲ್ಲಿ ನಡೆದಿದೆ. ಬೆಳಾಲು ನಿವಾಸಿ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(73) ಕೊಲೆಯಾದವರು.
ಮಂಗಳವಾರ ಮಧ್ಯಾಹ್ನ ಈ ಕೃತ್ಯ ನಡೆದಿದ್ದು, ಘಟನೆಯಿಂದ ಅಕ್ಕಪಕ್ಕವರು ಬೆಚ್ಚಿಬೀಳುವಂತಾಗಿದೆ. ಆದರೆ ಕೊಲೆಗೈದಿರುವುದು ಯಾರು?, ಕೊಲೆಗೆ ಕಾರವೇನು? ಎಂಬುದು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಾಲಕೃಷ್ಣ ಭಟ್ ಅವರು ಕೊಲ್ಪಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರ ಪತ್ನಿ ಲೀಲಾ ಅವರು ಕೂಡ ಬೆಳಾಲಿನಲ್ಲಿ ಶಿಕ್ಷಕಿಯಾಗಿದ್ದು ನಿವೃತ್ತಿ ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಅವರು ತೀರಿಕೊಂಡಿದ್ದರು. ಇದೀಗ ಬಾಲಕೃಷ್ಣ ಭಟ್ ಕೊಲೆಯಾಗಿದೆ. ತೀರ ಹತ್ತಿರದ ರಕ್ತ ಸಂಬಂಧಿಯಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ : ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ನೀರುಪಾಲು..!