ಪ್ರತಿಯೊಬ್ಬರ ಸುರಕ್ಷತೆ, ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯ – ಕಾಲ್ತುಳಿತ ದುರಂತದ ಬಗ್ಗೆ RCB ಹೇಳಿದ್ದೇನು?

ಬೆಂಗಳೂರು : ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನಿನ್ನೆ ಕಾಲ್ತುಳಿತ, ನೂಕು ನುಗ್ಗಲು ಉಂಟಾಗಿ 11 ಮಂದಿ ಸಾವನ್ನಪ್ಪಿರೋ ದಾರುಣ ಘಟನೆ ನಡೆದಿದೆ. ಆರ್​ಸಿಬಿ ಆಟಗಾರರನ್ನ, ಟ್ರೋಫಿಯನ್ನ, ಕಣ್ತುಂಬಿಕೊಳ್ಳೋಕೆ ಬಂದಿದ್ದ ಫ್ಯಾನ್ಸ್​ ಸ್ಟೇಡಿಯಂ ಒಳಗೆ ಏಕಾಏಕಿ ನುಗ್ಗೋಕೆ ಯತ್ನಿಸಿದ್ದ ವೇಳೆ ಕಾಲ್ತುಳಿತ ಸಂಭವಿಸಿ ದುರಂತ ನಡೆದಿದೆ. ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗಳಾಗಿ ಅಸ್ವಸ್ಥಗೊಂಡಿದ್ದು, ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರಂತದ ಬಗ್ಗೆ ಆರ್​ಸಿಬಿ ಹೇಳಿದ್ದೇನು? ಮಾಧ್ಯಮಗಳ ಮೂಲಕ ಬೆಳಕಿಗೆ ಬಂದ ಇಂದಿನ ಘಟನೆ ಬಗ್ಗೆ ತೀವ್ರ ನೊಂದಿದ್ದೇವೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಜೀವ ಕಳೆದುಕೊಂಡವರಿಗಾಗಿ ಆರ್​ಸಿಬಿ ಶೋಕಿಸುತ್ತಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದೆ.

ಪರಿಸ್ಥಿತಿ ಬಗ್ಗೆ ತಿಳಿದ ತಕ್ಷಣವೇ ಕಾರ್ಯಕ್ರಮದಲ್ಲಿ ತಿದ್ದುಪಡಿ ಮಾಡಿಕೊಂಡಿದ್ದೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಅನುಸರಿಸಿದ್ದೇವೆ. ಆರ್​ಸಿಬಿಯ ಎಲ್ಲಾ ಬೆಂಬಲಿಗರು ದಯವಿಟ್ಟು ಸುರಕ್ಷಿತವಾಗಿರಲು ವಿನಂತಿಸುತ್ತೇವೆ.. ಅಂತಾ ಆರ್​ಸಿಬಿ ಅಧಿಕೃತವಾಗಿ ಪೋಸ್ಟ್ ಬಿಡುಗಡೆ ಮಾಡಿದೆ.

ಆಗಿದ್ದೇನು..? ಐಪಿಎಲ್​ ಫೈನಲ್​ನಲ್ಲಿ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್​ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ನಿನ್ನೆ ವಿಧಾನಸೌಧದ ಮುಂಭಾಗದಲ್ಲಿ ಆರ್​ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್​ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ, ಫ್ಯಾನ್ಸ್​ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದಾರೆ. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ.

ಇದನ್ನೂ ಓದಿ : ಬೌರಿಂಗ್ ಕ್ಲಬ್ ಭೂಹಗರಣದ ತನಿಖೆ ಆರಂಭ – ಆರಕ್ಕೂ ಹೆಚ್ಚು ಕಮಿಟಿ ಸದಸ್ಯರು ಜೈಲು ಸೇರೋದು ಫಿಕ್ಸ್!

Btv Kannada
Author: Btv Kannada

Read More