‘ಬಿಗ್​ಬಾಸ್ ಕನ್ನಡ’ ಕೇವಲ ರಿಯಾಲಿಟಿ ಶೋ ಅಲ್ಲ, ಸಾಂಸ್ಕೃತಿಕ ಶಕ್ತಿ ಕೇಂದ್ರ : ಜಿಯೋಸ್ಟಾರ್ ಸೌತ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ!

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್​ಬಾಸ್‌ ಇನ್ನೇನು ಕೆಲ ದಿನಗಳಲ್ಲಿಯೇ ಕನ್ನಡದಲ್ಲಿ ಹೊಸ ಸೀಸಸ್​ನೊಂದಿಗೆ ಆರಂಭವಾಗಲಿದೆ. ಇದೇ ಸೆಪ್ಟೆಂಬರ್‌ 28ರಿಂದ ಕನ್ನಡ ಬಿಗ್‌ ಬಾಸ್‌ ಸೀಸನ್‌ 12 ಶುರುವಾಗಲಿದ್ದು, ಈ ಬಾರಿಯೂ ಕಿಚ್ಚ ಸುದೀಪ್‌ ನಿರೂಪಣೆ ಮಾಡಲಿದ್ದಾರೆ. ಕರ್ನಾಟಕದ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿ ಮುಂದುವರಿಯುತ್ತಿರುವ ಬಿಗ್​ಬಾಸ್ ಕನ್ನಡ, ತನ್ನ 11ನೇ ಸೀಸನ್‌ನಲ್ಲಿ ಕರ್ನಾಟಕದ 82% ಟಿವಿ ಪ್ರೇಕ್ಷಕರಿಗೆ ತಲುಪಿ ರಾಜ್ಯದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂಬ ಸ್ಥಾನವನ್ನು ದೃಢಪಡಿಸಿಕೊಂಡಿದೆ. ದಶಕಕ್ಕಿಂತ ಹೆಚ್ಚು ಕಾಲದಿಂದ ಪ್ರಸಾರವಾಗುತ್ತಿರುವ ಈ ಶೋ, ಸಾಂಸ್ಕೃತಿಕ ಪ್ರಾಮಾಣಿಕತೆಯೊಂದಿಗೆ ಮನರಂಜನೆಯನ್ನು ಒಗ್ಗೂಡಿಸಿ, ಪೀಳಿಗೆಯನ್ನು ಮೀರಿದ ಪ್ರೇಕ್ಷಕರನ್ನು ತಲುಪುತ್ತಿದೆ.

ಈ ಬಗ್ಗೆ ಮಾತನಾಡಿರುವ ಜಿಯೋಸ್ಟಾರ್ ಸೌತ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಅವರು, ಸೂಪರ್‌ಸ್ಟಾರ್ ಕಿಚ್ಚ ಸುದೀಪ್​ ನಿರೂಪಕರಾಗಿರುವ ಬಿಗ್ ಬಾಸ್ ಕನ್ನಡ ಕೇವಲ ರಿಯಾಲಿಟಿ ಶೋ ಅಷ್ಟೇ ಅಲ್ಲ, ಒಂದು ಸಾಂಸ್ಕೃತಿಕ ಸಂಭಾಷಣೆ ಆಗಿದೆ. ಪ್ರತಿ ವರ್ಷ ಹೊಸ ಆಟದ ವಿಧಾನಗಳು, ವೈವಿಧ್ಯಮಯ ಸ್ಪರ್ಧಿಗಳು ಮತ್ತು ತಂತ್ರಜ್ಞಾನ ಆಧಾರಿತ ಪ್ರೇಕ್ಷಕರ ಪಾಲ್ಗೊಳ್ಳುವಿಕೆ ಮೂಲಕ ಈ ಶೋ ಹೊಸತನ್ನು ನೀಡುತ್ತಾ ಬಂದಿದೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿದೆ. ಇದು ಸಮಾಜದ ವೈವಿಧ್ಯಮಯ ಸಂಕೀರ್ಣತೆಯನ್ನು ಪ್ರತಿಬಿಂಬಿಸುವುದರಿಂದ ಪ್ರೇಕ್ಷಕರೊಂದಿಗೆ ಆಳವಾದ ಸಂಪರ್ಕ ಸಾಧಿಸುತ್ತದೆ. ಅಪ್ರತೀಕ್ಷಿತ, ತೀವ್ರ ಮತ್ತು ತೊಡಗಿಸಿಕೊಂಡ ಅನುಭವವನ್ನು ನೀಡುವ ಶೋ ಇದಾಗಿದೆ. ಪ್ರತೀ ಸೀಸನ್ ತನ್ನನ್ನು ಹೊಸ ರೂಪದಲ್ಲಿ ಮರುಪರಿಚಯಿಸಿ ಕೊಂಡಿರುವುದರಿಂದಲೇ ಪ್ರೇಕ್ಷಕರ ನಿಷ್ಠೆ ಇಷ್ಟು ವರ್ಷಗಳಿಂದ ಮುಂದುವರಿದಿದೆ.

ಈ ವರ್ಷಗಳಲ್ಲಿ ಬಿಗ್ ಬಾಸ್ ಅನೇಕ ಹೊಸ ತಾರೆಗಳನ್ನು ಮತ್ತು ಪ್ರಭಾವಶೀಲರನ್ನು ಕನ್ನಡಿಗರಿಗೆ ಪರಿಚಯಿಸಿದೆ. ಅನೇಕ ಸ್ಪರ್ಧಿಗಳು ಮನೆಮಾತಾಗಿದ್ದಾರೆ. ಜೊತೆಗೆ, ಆಟೋ, ಟೆಕ್, ಇ-ಕಾಮರ್ಸ್, FMCG ಮತ್ತು ಆಹಾರ-ಪಾನೀಯ ವಲಯಗಳಂತೆ ಅನೇಕ ಬ್ರ್ಯಾಂಡ್‌ಗಳಿಗೆ ಶಕ್ತಿಯುತ ವೇದಿಕೆಯಾಗಿರುವುದು ಇದರ ವೈಶಿಷ್ಟ್ಯ. ಶೋನಲ್ಲಿನ ಕಾರ್ಯ ಚಟುವಟಿಕೆಗಳೊಂದಿಗೆ ಬ್ರ್ಯಾಂಡ್‌ ಕಥೆಗಳ ಸಂಯೋಜನೆ, ಗ್ರಾಹಕರೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಿದೆ.

ಸ್ಥಳೀಯ ಸ್ಪರ್ಶ, ಜಾಗತಿಕ ಆಕರ್ಷಣೆ ಬಿಗ್ ಬಾಸ್ ಸೌತ್ ಪ್ರತಿ ಆವೃತ್ತಿಯೂ ಸ್ಥಳೀಯ ಮೌಲ್ಯಗಳನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸ್ಪರ್ಧಿಗಳ ಆಯ್ಕೆಗಳಿಂದ ಹಿಡಿದು ಕಾರ್ಯಗಳ ವಿನ್ಯಾಸದವರೆಗೆ.. ಜೊತೆಗೆ, ಸಂಬಂಧಗಳು, ಸವಾಲುಗಳು, ಮಾನವೀಯ ಕಥೆಗಳು ಎಂಬ ವಿಶ್ವವ್ಯಾಪಿ ಅಂಶಗಳು ಎಲ್ಲ ವಯೋಮಾನದವರಿಗೂ ಆಕರ್ಷಕವಾಗಿವೆ. ಅನೇಕ ಮನೆಗಳಲ್ಲಿ ಅಜ್ಜ-ಅಜ್ಜಿ, ಮೊಮ್ಮಕ್ಕಳೊಂದಿಗೆ ಕುಳಿತು ಚರ್ಚಿಸುತ್ತಾ ನೋಡಬಹುದಾದ ಕುಟುಂಬ ಒಗ್ಗಟ್ಟಿನ ಶೋ ಆಗಿದೆ ಎಂದು ಕೃಷ್ಣನ್ ಕುಟ್ಟಿ ವರ್ಣಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಬಿಗ್ ಬಾಸ್ ಸೌತ್‌ನ ಯಶಸ್ಸು ಪ್ರಾದೇಶಿಕ ಮಾರುಕಟ್ಟೆಯಲ್ಲಿ ಪ್ರೇಕ್ಷಕರ ನಿರೀಕ್ಷೆಗಳನ್ನು ಬದಲಿಸಿದೆ. ಇಂದು ಪ್ರೇಕ್ಷಕರು ದೊಡ್ಡ ಮಟ್ಟದ ಹೆಚ್ಚು ತೊಡಗಿಸಿಕೊಂಡ ಹಾಗೂ ಭಾವನಾತ್ಮಕವಾಗಿ ಬಲವಾದ ಫಾರ್ಮ್ಯಾಟ್‌ಗಳನ್ನು ಬಯಸುತ್ತಿದ್ದಾರೆ. ಜಿಯೋಹಾಟ್‌ಸ್ಟಾರ್ ಮೂಲಕ ಲೈವ್ ವೋಟಿಂಗ್, ಸಮೀಕ್ಷೆಗಳು ಮತ್ತು ಕ್ವಿಜ್‌ಗಳಲ್ಲಿ ಭಾಗವಹಿಸುವ ಅವಕಾಶದಿಂದ ಪ್ರೇಕ್ಷಕರು ಶೋನ ಭಾಗವೆಂದು ಅನುಭವಿಸುತ್ತಿದ್ದಾರೆ. ಸ್ಥಳೀಯತೆಯ ಜತೆಗೆ ನವೀನತೆಗಳನ್ನು ಅಳವಡಿಸಿಕೊಂಡ ಬಿಗ್ ಬಾಸ್ ಕನ್ನಡ, ಪ್ರಾದೇಶಿಕ ಮನರಂಜನೆಗೆ ಮಾನದಂಡವಾಗಿದ್ದು, ತನ್ನ ವ್ಯಾಪ್ತಿ, ತಲುಪುವಿಕೆ ಮತ್ತು ಪ್ರಭಾವವನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಡ್ರಗ್ಸ್ ಪೆಡ್ಲರ್​ಗಳಿಗೆ ಪೊಲೀಸರೇ ಸಾಥ್ – ಚಾಮರಾಜಪೇಟೆ ಇನ್ಸ್​​ಪೆಕ್ಟರ್​​ ಟಿ.ಮಂಜಣ್ಣ ಸೇರಿ 11 ಪೊಲೀಸರು ಸಸ್ಪೆಂಡ್!

Btv Kannada
Author: Btv Kannada

Read More