ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದ್ದು ಪೊಲೀಸರು ಆರೋಪಿಯೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವಿಚಾರ ಬಯಲಾಗಿದೆ. 2023ರಲ್ಲಿ ಕಳ್ಳತನ ಕೇಸ್ ದಾಖಲಾಗಿದ್ದ ಆರೋಪಿಯನ್ನು ಬಂಧಿಸಿ ಮನೆಯವರಿಗೂ ಮಾಹಿತಿ ನೀಡದೆ ಫೆ.1ರಿಂದ 10 ದಿನಗಳ ಕಾಲ ಅಕ್ರಮ ಬಂಧನದಲ್ಲಿಡಲಾಗಿತ್ತು. ಸದ್ಯ ಆರೋಪಿಯ ಕುಟುಂಬಸ್ಥರ ದೂರಿನ ಮೇರೆಗೆ ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದ್ದು ಪೊಲೀಸರ ಕಳ್ಳಾಟ ಬಯಲಾಗಿದೆ.
ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಮೃತಹಳ್ಳಿ ಠಾಣೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಮೃತಹಳ್ಳಿ ಪೊಲೀಸರು, ಆರೋಪಿಯನ್ನ ಅಕ್ರಮವಾಗಿ ಬಂಧನದಲ್ಲಿಟ್ಟಿರುವುದು ಪತ್ತೆಯಾಗಿದೆ. ಯಾಸಿನ್ ಮೆಹಬೂಬ್ ಖಾನ್ ಎಂಬ ಆರೋಪಿಯನ್ನು ಫೆ.1ರಿಂದ 10 ದಿನಗಳ ಕಾಲ ಅಕ್ರಮ ಬಂಧನದಲ್ಲಿಡಲಾಗಿತ್ತು. 2023ರಲ್ಲಿ ಯಾಸಿನ್ ಖಾನ್ ವಿರುದ್ಧ ಕಳ್ಳತನ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ಬಳಿಕ ಆರೋಪಿ ಯಾಸಿನ್ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್ ಆಧರಿಸಿ ಪೊಲೀಸರು ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿದ್ದರು.
ಇನ್ನು ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದ ವೇಳೆ ಠಾಣೆಯ ದಾಖಲಾತಿಯಲ್ಲಿ ಆರೋಪಿ ಯಾಸಿನ್ ಖಾನ್ ವಶಕ್ಕೆ ಪಡೆದಿದ್ದ ಬಗ್ಗೆ ದಾಖಲಾತಿಯಲ್ಲಿ ಉಲ್ಲೇಖಿಸಿರಲಿಲ್ಲ. ಆರೋಪಿಯ ಕುಟುಂಬಸ್ಥರಿಗೂ ವಶಕ್ಕೆ ಪಡೆದಿದ್ದ ಬಗ್ಗೆ ತಿಳಿಸಿರಲಿಲ್ಲ. ಹೀಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಆರೋಪಿಯ ಕುಟುಂಬ ದೂರು ನೀಡಿತ್ತು. ದೂರು ಆಧರಿಸಿ ಆಯೋಗದ DySP ನೇತೃತ್ವದ ತಂಡ ಠಾಣೆ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಆರೋಪಿಯನ್ನು ಅಕ್ರಮವಾಗಿ ಠಾಣೆಯಲ್ಲಿಟ್ಟಿದ್ದು ಬಯಲಾಗಿದೆ. ಸದ್ಯ ಈಗ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಸದ್ಯ ಅಧಿಕಾರಿಗಳು ಇನ್ಸ್ಪೆಕ್ಟರ್, ಸಿಬ್ಬಂದಿ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಇಂದು ರಾತ್ರಿಯೇ ರಾಜ್ಯಕ್ಕೆ ಆಗಮಿಸಲಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ..!