ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್ ಕೊಡಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಆದರೆ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ವರಿಷ್ಠರು ಮೀನಾಮೇಷ ಎಣಿಸುತ್ತಿದ್ದರು. ಸೀಟು ಹಂಚಿಕೆ ವಿಚಾರದಿಂದ ಚುನಾವಣೆ ಆರಂಭದಲ್ಲೇ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಬಿರುಕಿನ ಭೀತಿ ಭುಗಿಲೆದ್ದಿತ್ತು.
ಬಿಜೆಪಿ ಕೋಲಾರ ಸೀಟು ಹಂಚಿಕೆ ವಿಚಾರದಲ್ಲಿ ಸ್ಪಷ್ಟವಾಗಿ ನಿರ್ಧಾರ ಕೈಗೊಳ್ಳದ ಹಿನ್ನಲೆ ದಳಪತಿಗಳು ಕೆಂಡ ಮಂಡಲವಾಗಿದ್ದರು. ಅತೃಪ್ತಿ ಹೆಚ್ಚಾದ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡರು ದೆಹಲಿಗೆ ಭೇಟಿ ನೀಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಜತೆ ಕರ್ನಾಟಕದ ಸೀಟ್ ಹಂಚಿಕೆ ಸಂಬಂಧ ಚರ್ಚೆ ನಡೆಸಲು ತೀರ್ಮಾನಿಸಿದ್ದರು.
ಇದರೊಂದಿಗೆ ದೇವೇಗೌಡರು ಕೋಲಾರ ಬಿಟ್ಟು ಕೊಡದೇ ಇದ್ರೆ ನಮ್ಮ ದಾರಿ ನಮಗೆ ಅನ್ನೋ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ಹೇಳಲು ಮುಂದಾಗಿದ್ದರು. ಆದರೆ ಇದೀಗ ದೇವೇಗೌಡರು ದೆಹಲಿ ಎಂಟ್ರಿ ಕೊಡ್ತಿದ್ದಂತೆ ದಳಪತಿಗಳ ಒಂದೇ ಬೆದರಿಕೆಗೆ ಬಿಜೆಪಿ ಜೆಡಿಎಸ್ಗೆ ಕೋಲಾರ ಟಿಕೆಟ್ ಘೋಷಿಸಿದೆ.
ಬೆಂಗಳೂರಿನ ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ನಡೆದ ರಾಜ್ಯ ಚುನಾವಣೆ ನಿರ್ವಹಣಾ ಸಮಿತಿಯ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಬಿಜೆಪಿಯ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸೀಟ್ ಹಂಚಿಕೊಂಡು ಸ್ಪರ್ಧೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
25 ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಹೀಗಾಗಿ ಅವರು ಕೇಳಿದ ಕೋಲಾರ, ಮಂಡ್ಯ, ಹಾಸನ 3 ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದ್ದೇವೆ ಎಂದು ರಾಧಾ ಮೋಹನ್ ದಾಸ್ ಅವರು ಕಾರ್ಯಾಗಾರದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : ಮಗು ದತ್ತು ಪಡೆದ ಪ್ರಕರಣ : ಸೋನು ಶ್ರೀನಿವಾಸ್ ಗೌಡರನ್ನು ಇಂದು ರಾಯಚೂರಿಗೆ ಕರೆದೊಯ್ಯುವ ಸಾಧ್ಯತೆ..!