ಬೆಂಗಳೂರು : ಮಂಗಳೂರು ಲೋಕಸಭಾ ಕ್ಷೇತ್ರದ ಸಂಭವನೀಯ ಬಿಜೆಪಿ ಅಭ್ಯರ್ಥಿ ಹಾಗೂ ಹಿರಿಯ ಹೈಕೋರ್ಟ್ ವಕೀಲ, ಅರುಣ್ ಶ್ಯಾಮ್ ಅವರನ್ನು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಡಿ ಹೊಗಳಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ಕಾರ್ಯಕ್ರಮ ಆಯೋಜನೆಗೆ ಕಾನೂನು ನೆರವು ನೀಡಿದ್ದಕ್ಕೆ ಸೂಲಿಬೆಲೆ ಆಭಾರ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಆಯೋಜನೆಯಾಗಿತ್ತು. ಇದಕ್ಕಾಗಿ, ಬುಧವಾರ ರಾತ್ರಿ ಕಲಬುರಗಿಗೆ ಪ್ರಯಾಣಿಸಿದ್ದರು. ಆದರೆ, ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ಧಂತೆಯೇ, ಚಕ್ರವರ್ತಿ ಸೂಲಿಬೆಲೆ ಅವರನ್ನು ಪೊಲೀಸರು ತಡೆದಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ಕೊಟ್ಟಿಲ್ಲ. ನೀವು ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ ಎಂದು ಹೇಳಿ ಪೊಲೀಸರು ಅಡ್ಡಗಟ್ಟಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಕಾರ್ಯಕ್ರಮ ರದ್ದುಪಡಿಸಿ ಆದೇಶ ಪತ್ರವನ್ನು ಸೂಲಿಬೆಲೆಗೆ ಹಸ್ತಾಂತರಿಸಲಾಗಿತ್ತು.
ಈ ವೇಳೆ, ಸೂಲಿಬೆಲೆ ಹಿರಿಯ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಅವರನ್ನು ಸಂಪರ್ಕಿಸಿ ನೆರವು ಕೋರಿದ್ದರು. ತಕ್ಷಣವೇ ನೆರವಿಗೆ ಧಾವಿಸಿದ ಅರುಣ್ ಶ್ಯಾಮ್ ಅವರು ತಮ್ಮ ಗೆಳೆಯರ ತಂಡದ ಮೂಲಕ ಕಲಬುರಗಿ ನ್ಯಾಯಾಲಯದಲ್ಲಿ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿದ್ದರು. ಸ್ವತ: ಅರುಣ್ ಶ್ಯಾಮ್ ಅವರೇ ಆನ್ಲೈನ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿ, ಸೂಲೆಬೆಲೆ ಪರ ವಾದ ಮಂಡಿಸಿದ್ದರು.
ಅರುಣ್ ಶ್ಯಾಮ್ ಅವರ ಸಮರ್ಥ ವಾದಮಂಡನೆ ಪುರಸ್ಕರಿಸಿದ ನ್ಯಾಯಾಲಯ, ಸೂಲಿಬೆಲೆಯ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಡೆದ ಎಲ್ಲಾ ವಿಚಾರಣಗಳನ್ನು ಹಂಚಿಕೊಂಡಿರುವ ಸೂಲಿಬೆಲೆ, ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಸ್ನಲ್ಲಿರೋ ಅರುಣ್ ಶ್ಯಾಮ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಎಂಥಾ ಸಂಕಷ್ಟದ ಸಮಯದಲ್ಲೂ ಅರುಣ್ ಶ್ಯಾಮ್ ಹಿಂದೂ ಕಾರ್ಯಕರ್ತರದ ಜೊತೆಗಿರುತ್ತಾರೆ. ಕಾರ್ಯಕರ್ತರಿಗೆ ಸಂಕಟ ಎದುರಾದಾಗ, ಹಗಲು-ರಾತ್ರಿ ಎನ್ನದೆ ಅವರು ಸ್ಪಂದಿಸ್ತಾರೆ. ಅವರ ಸಿದ್ಧಾಂತ ನಿಷ್ಠೆಗೆ, ಹಿಂದುತ್ವದ ಮೇಲಿನ ಅಭಿಮಾನಕ್ಕೆ, ಹಿಂದೂ ಕಾರ್ಯಕರ್ತರಿಗೆ ಜೊತೆಯಾಗಿ ನಿಲ್ಲುವ ಅವರ ನಿಷ್ಕಳಂಕ ಮನಸ್ಸಿಗೆ ನನ್ನದೊಂದು ಪ್ರೀತಿಯ ನಮೋ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಬರೆದುಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ವಕೀಲ ಅರುಣ್ ಶ್ಯಾಮ್ ಮತ್ತು ಅವರ ತಂಡ ಹಿಂದೂ ಕಾರ್ಯಕರ್ತರ ನೆರವಿಗೆ ಧಾವಿಸಿದೆ. ಇದೀಗ ಸೂಲಿಬೆಲೆಯವರೇ ಹಾಡಿ ಹೊಗಳಿರುವುದು ಹಿಂದೂ ಕಾರ್ಯಕರ್ತರಲ್ಲಿ ಅರುಣ್ ಶ್ಯಾಮ್ ಅವರ ಬಗೆಗಿನ ಅಭಿಮಾನ ಹೆಚ್ಚಿಸಿದೆ.
– BTV NEWS DESK
ಇದನ್ನೂ ಓದಿ : ಪಾಕ್ ಪರ ಘೋಷಣೆ ಕೇಸ್ : ವರದಿ ಬಹಿರಂಗ ಪಡಿಸಲು ಮೀನಾಮೇಷ ಯಾಕೆ..? – ಸರ್ಕಾರದ ಮೇಲೆ ಆರ್.ಅಶೋಕ್ ಅನುಮಾನ..!