ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ರೈತರ ಹೋರಾಟ ಶುರುವಾಗಲಿದೆ. ವೈಜ್ಞಾನಿಕ ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ಇಂದಿನಿಂದ ರೈತ ಸಂಘಟನೆಗಳು ಬೃಹತ್ ಹೋರಾಟ ಆರಂಭಿಸಲಿವೆ.
200ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆ ನಂತರ ರೈತರು ದೆಹಲಿಗೆ ಲಗ್ಗೆ ಹಾಕಲು ತಯಾರಿ ನಡೆಸುತ್ತಿದ್ದಾರೆ. ದೆಹಲಿ-ಪಂಜಾಬ್, ದೆಹಲಿ ಹರ್ಯಾಣ ನಡುವಿನ ಸಿಕ್ರಿ, ಸಿಂಗೂ ಗಡಿ, ಘಾಜಿಪುರ ಗಡಿಯಲ್ಲಿ ರೈತರು ಜಮಾಯಿಸುತ್ತಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜ್ದೂರ್ ಮೋರ್ಚಾ, ಸಂಯುಕ್ತ ಸಮಾಜ ಮೋರ್ಚಾ ಸೇರಿದಂತೆ 200 ಸಂಘಟನೆಗಳು ಕೈಜೋಡಿಸಿವೆ.
ಹೀಗಾಗಿ ಇದೇ ವೇಳೆ ದಿಲ್ಲಿ ಪೊಲೀಸರು ಸಹ ಅಲರ್ಟ್ ಆಗಿದ್ದು, ವಿವಿಧ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಗಡಿಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಟ್ರ್ಯಾಕ್ಟರ್- ಟ್ರಾಲಿಗಳಲ್ಲಿ ಮೆರವಣಿಗೆ ಬರಲಿರುವ ರೈತರನ್ನು ದಿಲ್ಲಿ ಪ್ರವೇಶಿಸದಂತೆ ತಡೆಯಲು ಗಡಿಯಲ್ಲಿ ಬೃಹತ್ ಕ್ರೇನ್, ಕಂಟೈನರ್ಗಳನ್ನು ಸಜ್ಜುಗೊಳಿಸಿದ್ದಾರೆ. ಮುಳ್ಳು ತಂತಿ ಬೇಲಿಗಳನ್ನು ಅಳವಡಿಸಿದ್ದಾರೆ.
ಸುಮಾರು 5000 ಟ್ರ್ಯಾಕ್ಟರ್ಗಳಲ್ಲಿ ಭಾರಿ ಸಂಖ್ಯೆಯಲ್ಲಿ ರೈತರ ಸಾಮೂಹಿಕ ಮೆರವಣಿಗೆ ನಡೆಯುವ ಸಾಧ್ಯತೆ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಗಳು ದಿಲ್ಲಿ, ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳನ್ನು ಎಚ್ಚರಿಸಿವೆ. ವಿವಿಧ ಜಿಲ್ಲೆಗಳಿಂದ ಅಂದಾಜು 25 ಸಾವಿರ ರೈತರು ದಿಲ್ಲಿ ಕಡೆಗೆ ಸಾಗುವ ನಿರೀಕ್ಷೆ ಇದೆ.
ಬೇಡಿಕೆ ಏನೇನು..?
- ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಖಾತರಿ
- ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ
- ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ
- ಕೃಷಿ ಸಾಲ ಮನ್ನಾ ಮಾಡುವುದು
- ಈ ಹಿಂದೆ ಹಾಕಿದ್ದ ಪೊಲೀಸ್ ಪ್ರಕರಣ ವಾಪಸ್
- ಲಖಿಂಪುರ್ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ “ನ್ಯಾಯ” ನೀಡಿ
- ಭೂಸ್ವಾಧೀನ ಕಾಯ್ದೆ 2013 ಅನ್ನು ಪುನಃಸ್ಥಾಪಿಸುವುದು
- ವಿಶ್ವ ವ್ಯಾಪಾರ ಸಂಸ್ಥೆಯಿಂದ ಹಿಂದೆ ಸರಿಯುವುದು
- ಹಿಂದಿನ ಆಂದೋಲನ ವೇಳೆ ಮೃತಪಟ್ಟ ರೈತರಿಗೆ ಪರಿಹಾರ
- 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 10,000 ನೆರವು
- C-200 ವ್ಯಾಪ್ತಿಗೆ ಕಬ್ಬು ಸೇರ್ಪಡೆ ಮಾಡುವುದು
ಇದನ್ನೂ ಓದಿ : ಕಿರುತೆರೆ ನಟ ರವಿಕಿರಣ್ ವಿರುದ್ಧ ವಂಚನೆ ಆರೋಪ : ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ದೂರು..!