ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪಣೆಗೆ ಕ್ಷಣಗಣನೆ ಶುರುವಾಗಿದೆ. 70 ಎಕರೆಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ರಾಮರಾಜ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅಯೋಧ್ಯೆ ಮಧುವಣಗಿತ್ತಿಯಂತೆ ರೆಡಿಯಾಗಿದ್ದು, ಇಂದು ರಾಮಲಲ್ಲಾ ದರ್ಶನ ನೀಡಲಿದ್ದಾನೆ.
ಮಧ್ಯಾಹ್ನದ ಅಭಿಜಿನ್ ಲಗ್ನದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ಮೋದಿ ಅಯೋಧ್ಯೆ ರಾಮಮಂದಿರ ಉದ್ಘಾಟಿಸಲಿದ್ದಾರೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆ ಹೇಗಿರುತ್ತೆ..?
ಶಿಲ್ಪಿ ಕೆತ್ತಿದ ಮೂರ್ತಿಗೆ ದೈವಿಕ ಶಕ್ತಿ ತುಂಬುವುದೇ ಪ್ರಾಣ ಪ್ರತಿಷ್ಠಾಪನೆ. ಗರ್ಭಗುಡಿಯಲ್ಲಿ ಕೂರಿಸಿರುವ ಬಾಲರಾಮನಿಗೆ ಶಾಸ್ತ್ರೋಕ್ತ ಪೂಜೆ ನಡೆಯಲಿದ್ದು, ವೇದಾಗಮ ಪಂಡಿತರು ಮಂತ್ರಘೋಷ ಮೊಳಗಿಸಲಿದ್ದಾರೆ. ಮಂತ್ರಘೋಷ, ಪೂಜೆ ನಂತರ ವಿಗ್ರಹಣ ಪೂರ್ಣ ರೂಪ ಅನಾವರಣವಾಗಲಿದೆ.
ವಿಗ್ರಹದ ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆದು ಪೂಜಾ ಕಾರ್ಯ ಆರಂಭ ಮಾಡಲಿದ್ದು, ಪ್ರಧಾನಿ ಮೋದಿ ಖುದ್ದು ರಾಮಲಲ್ಲಾ ಹಣೆಗೆ ತಿಲಕ ಇಡಲಿದ್ದಾರೆ. ವೈದಿಕರು ಕಣ್ಣಿಗೆ ನೇತ್ರ ಬಿಂದು ಇಡುವ ಪ್ರಕ್ರಿಯೆ ನೆರವೇರಿಸಲಿದ್ದಾರೆ. ಕನ್ನಡಿಯನ್ನು ರಾಮನ ಮುಖಕ್ಕೆ ಎದುರಾಗಿ ಹಿಡಿದು ಅದರಲ್ಲಿ ಮೂರ್ತಿ ದರ್ಶನ ಪಡೆಯಲಿದ್ದಾರೆ.
ನಂತರ ಬಾಲ ರಾಮ ಮೂರ್ತಿಗೆ ಅಭಿಷೇಕ ಆರಂಭವಾಗಲಿದೆ. ಮಹಾಮಸ್ತಕಾಭಿಷೇಕ ನೆರವೇರಿಸಿದ ನಂತರ ಮೂರ್ತಿಗೆ ಸಿಂಗಾರ ಮಾಡಲಿದ್ದಾರೆ. ಆಭರಣಗಳಿಂದ ಅಲಂಕರಿಸಿ, ಶಿರದ ಮೇಲೆ ಕಿರೀಟ ಧಾರಣೆಯಾಗಲಿದೆ.
ಇದನ್ನೂ ಓದಿ : ಅಯೋಧ್ಯೆಗೆ ತೆರಳಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರ ಕುಟುಂಬ..!