ಬೆಂಗಳೂರು: ಕಳೆದೆರಡು ವರ್ಷಗಳ ಹಿಂದೆ ಶ್ರದ್ಧಾ ವಾಕರ್ ಎಂಬ ಯುವತಿಯ ಬರ್ಬರ ಹತ್ಯೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಇದೀಗ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಕೊಲೆಯ ರೀತಿಯಲ್ಲೇ ಬೆಂಗಳೂರಿನಲ್ಲಿಯೂ ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಲೆಯಾದ ಯುವತಿಯನ್ನು 26 ವರ್ಷದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ.
10 ದಿನಗಳ ಹಿಂದೆನೇ ವೈಯಾಲಿಕಾವಲ್ನ ಮುನೇಶ್ವರ ಬ್ಲಾಕ್ನಲ್ಲಿ ಘನಘೋರ ಕೃತ್ಯ ನಡೆದಿದೆ ಎಂಬುದು ತಿಳಿದು ಬಂದಿದೆ. ಹಂತಕ ಯುವತಿಯನ್ನ ಕೊಲೆ ಮಾಡಿದ್ದಲ್ಲದೇ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟ ಎಂಬುದು ಬಯಲಾಗಿದೆ.
ಯುವತಿಯ ತಾಯಿ, ಅಕ್ಕ ಮನೆಗೆ ಬಂದಾಗ ಫ್ರಿಡ್ಜ್ನಲ್ಲಿ ಮಗಳ ಶವ ಇರುವುದು ಕಂಡು ಬಂದಿದೆ. ಮಗಳ ಶವ ಕಂಡು ಆಘಾತಕ್ಕೊಳಗಾಗಿ ಅಲ್ಲೇ ಕುಸಿದು ಬಿದ್ದ ತಾಯಿ, ಕೂಡಲೇ ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಹತ್ಯೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ತಲಾಶ್ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಭೇಟಿ ನೀಡಿದ್ದಾರೆ. ಇದರೊಂದಿಗೆ ಎಫ್ಎಸ್ಎಲ್ ತಂಡ, ಶ್ವಾನ ದಳ ಹಾಗೂ ಸೋಕೋ ಟೀಂನಿಂದಲೂ ಹತ್ಯೆ ನಡೆದ ಸ್ಥಳದಲ್ಲಿ ಸರ್ಚಿಂಗ್ ನಡೆಯುತ್ತಿದೆ.
ವೈಯಾಲಿಕಾವಲ್ನಲ್ಲಿ ಕೊಲೆಯಾಗಿದ್ದ 26 ವರ್ಷದ ಮಹಿಳೆ, ಕಟ್ಟಿಂಗ್ ಶಾಪ್ನಲ್ಲಿ ಕೆಲಸ ಮಾಡ್ತಿದ್ದೋನ ಜೊತೆ ಆತ್ಮೀಯವಾಗಿದ್ದಳು. ಇದೇ ವಿಚಾರಕ್ಕೆ ಪತಿ ಪತ್ನಿ ನಡುವೆ ಹಲವು ಬಾರಿ ಜಗಳವಾಗಿತ್ತು. ಹೀಗಾಗಿ 4 ವರ್ಷದ ಮಗುವನ್ನ ತನ್ನ ತಂದೆ ಜೊತೆಗೆ ಬಿಟ್ಟು ಏಕಾಂಗಿಯಾಗಿ ವೈಯಾಲಿಕಾವಲ್ನಲ್ಲಿ ವಾಸವಿದ್ದಳು.
ಇನ್ನು ಮಗಳು ಮಹಾಲಕ್ಷ್ಮೀಗೆ ತಾಯಿ ಪದೇ ಪದೆ ಕಾಲ್ ಮಾಡುತ್ತಿದ್ದಂತೆ. ಆದರೆ ಕಳೆದ ಎರಡು ದಿನಗಳಿಂದ ಮಹಾಲಕ್ಷ್ಮೀ ಕಾಲ್ ಪಿಕ್ ಮಾಡದ ಕಾರಣ ಮಗಳ ಗಂಡನಿಗೆ ಫೋನ್ ಮಾಡಿ ಮಗಳು ಫೋನ್ ಮಾಡಿದ್ರೂ ಪಿಕ್ ಮಾಡ್ತಿಲ್ಲ ಅಂತಾ ತಿಳಿಸಿದ್ದಾರೆ. ಬಳಿಕ ಇವತ್ತು ಮಹಾಲಕ್ಷ್ಮೀ ತಾಯಿ ಜೊತೆ ಪತಿ ಕೂಡ ಮನೆ ಬಂದಿದ್ದಾರೆ. ಈ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ಅಕ್ಕಪಕ್ಕದವರನ್ನು ವಿಚಾರಿಸಿದಾಗ ಮಗಳು ಇದ್ದಳೆಂಬ ಮಾಹಿತಿ ಲಭ್ಯವಾಗಿದೆ.
ಕೊನೆಗೆ ಅನುಮಾನ ಬಂದು ಮನೆ ಬೀಗ ಒಡೆದು ಒಳಗೆ ಪರಿಶೀಲನೆ ನಡೆಸಿದ್ದಾರೆ. ಒಳಗೆ ನೋಡಿದಾಗ 165 ಲೀಟರ್ ಸಾಮರ್ಥ್ಯದ ಫ್ರಿಡ್ಜ್ನಲ್ಲಿ ಮಹಾಲಕ್ಷ್ಮೀಯ ಶವ ಪತ್ತೆಯಾಗಿದೆ. ಇನ್ನು ಮಗಳ ಶವ ಕಂಡು ಮೃತಳ ತಾಯಿ, ಅಕ್ಕ ಆಘಾತಗೊಂಡಿದ್ದಾರೆ.
ಕೊಲೆ ಮಾಡಿದ ಹಂತಕ 15 ದಿನಗಳಾದ್ರೂ ವಾಸನೆ ಬರದಂತೆ, ಕೆಮಿಕಲ್ ಹಾಕಿ ಶವದ ಪೀಸ್ ಪೀಸ್ಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದಾನೆ. ಹೀಗಾಗಿ 15 ದಿನಗಳಾದ್ರೂ ಅಕ್ಕಪಕ್ಕದವರಿಗೆ ವಾಸನೆ ಬಂದಿರ್ಲಿಲ್ಲ. ಇನ್ನು ಖತರ್ನಾಕ್ ಹಂತಕನಿಗಾಗಿ ವೈಯಾಲಿಕಾವಲ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮುನಿರತ್ನರನ್ನ ಸರ್ಕಾರ ಟಾರ್ಗೆಟ್ ಮಾಡ್ತಿದೆ ಅಂತ ಅನ್ನಿಸುತ್ತಿದೆ – ನಿಖಿಲ್ ಕುಮಾರಸ್ವಾಮಿ..!