ಮುಂಬೈ : ನೀಟ್-ಯುಜಿ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪುಣೆಯ ಸಸ್ಯಶಾಸ್ತ್ರ ಶಿಕ್ಷಕಿಯನ್ನು CBI ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಪುಣೆಯ ಹಿರಿಯ ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಗುರುನಾಥ್ ಮಂಢಾರೆ ಎಂಬುವವರನ್ನು ದೆಹಲಿಯಲ್ಲಿ ತೀವ್ರ ವಿಚಾರಣೆಯ ನಂತರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಮನೀಷಾ ಮಂಢಾರೆ ಅವರನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೀಟ್ ಪರೀಕ್ಷಾ ಪ್ರಕ್ರಿಯೆಯ ತಜ್ಞರನ್ನಾಗಿ ನೇಮಿಸಿತ್ತು. ಈ ಕಾರಣದಿಂದಾಗಿ ಅವರನ್ನು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಪ್ರಶ್ನೆ ಪತ್ರಿಕೆಗಳನ್ನು ನೋಡಿಕೊಳ್ಳುವ ಅಧಿಕಾರವನ್ನು ನೀಡಲಾಗಿತ್ತು. ಆದರೆ ಇದೀಗ ಈ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಅವರು, ಈ ಹಿಂದೆ ಬಂಧಿತರಾಗಿದ್ದ ಮನೀಷಾ ವಾಗ್ಮಾರೆ ಮೂಲಕ ನೀಟ್ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದಾರೆ.
ಏಪ್ರಿಲ್ 2026 ರ ಅವಧಿಯಲ್ಲಿ ಮನೀಷಾ ಮಂಢಾರೆ ತನ್ನ ಪುಣೆಯ ನಿವಾಸದಲ್ಲಿ ಆಯ್ಕೆಯಾದ ಕೆಲವು ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸಿದ್ದಾಳೆ. ಈ ತರಗತಿಗಳಲ್ಲಿ ಆಕೆ ನೀಟ್ ಪರೀಕ್ಷೆಗೆ ಬರಲಿದ್ದ ಬಯಾಲಜಿ ಪ್ರಶ್ನೆಗಳನ್ನು ಮುಂಚಿತವಾಗಿಯೇ ಬಹಿರಂಗಪಡಿಸಿ, ವಿದ್ಯಾರ್ಥಿಗಳ ನೋಟ್ಬುಕ್ ಮತ್ತು ಪಠ್ಯಪುಸ್ತಕಗಳಲ್ಲಿ ಗುರುತು ಮಾಡಿಸಿದ್ದಾರೆ. ಮೇ 3 ರಂದು ನಡೆದ ನಿಜವಾದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಈ ಪ್ರಶ್ನೆಗಳು ಸಂಪೂರ್ಣವಾಗಿ ತಾಳೆಯಾಗಿರುವುದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿದೆ.






