ಬೆಂಗಳೂರು : ಬೆಂಗಳೂರು ಉತ್ತರ ವಿಭಾಗದ ಸಹಾಯಕ ಆಯುಕ್ತ (AC) ಕಿರಣ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಈತನ ಮೇಲೆ ಸಾಲು ಸಾಲು ದೂರುಗಳು ದಾಖಲಾಗಿದೆ. ಇದೀಗ ಭ್ರಷ್ಟ ಅಧಿಕಾರಿ ಎಸಿ ಕಿರಣ್ ವಿರುದ್ಧ ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ಬೆಂಗಳೂರು ಉತ್ತರ ವಿಭಾಗದ ಎಸಿ ಆಗಿ ನೇಮಕಗೊಂಡಿರುವ ಕಿರಣ್ ವಿರುದ್ಧ ಒಂದಲ್ಲ, ಎರಡಲ್ಲ ಬರೋಬ್ಬರಿ ನೂರಕ್ಕೂ ಹೆಚ್ಚು ದೂರುಗಳು ಲೋಕಾಯುಕ್ತ ಸೇರಿದಂತೆ ವಿವಿಧೆಡೆ ದಾಖಲಾಗಿವೆ. ಅಷ್ಟೇ ಅಲ್ಲದೆ, ಅಕ್ರಮವಾಗಿ 100 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯದಲ್ಲೂ ದೂರು ದಾಖಲಾಗಿದೆ.

ಇನ್ನು ಬೆಂಗಳೂರು ಉತ್ತರ ವಿಭಾಗದ ಎಸಿ ವ್ಯಾಪ್ತಿಯಲ್ಲಿ ಹಲವಾರು ಕಂದಾಯ ಜಮೀನುಗಳಿಗೆ ಸಂಬಂಧಿಸಿದಂತ ಕೇಸ್ಗಳಿವೆ. ಈ ಕೇಸ್ಗಳ ಪ್ರತಿ ಫೈಲಿಗೆ 50 ಲಕ್ಷದಿಂದ ಎರಡು ಕೋಟಿ ಕೊಡದಿದ್ರೆ ಎಸಿ ಕಿರಣ್ ಸಹಿ ಮಾಡುವುದಿಲ್ಲ. ಕಚೇರಿಯಲ್ಲಂತೂ ಈತ ಸಿಗೋದೇ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳ ಈ ವರ್ತನೆಯಿಂದ ಜನಸಾಮಾನ್ಯರು ಕಚೇರಿಗೆ ಅಲೆದು ಸಾಕಾಗಿ ಹೋಗಿದ್ದಾರೆ.

ಎಸಿ ಕಿರಣ್ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೇಸರ ಹೊರಹಾಕಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ಎಸಿ ಕಿರಣ್ ರಾಜ್ಯದಲ್ಲೇ ಅತ್ಯಂತ ಕಳಪೆ ಸಾಧನೆ ಮಾಡಿದ್ದಾರೆ. ಇವರ ಈ ಬೇಜವಾಬ್ದಾರಿತನ ಹಾಗೂ ಭ್ರಷ್ಟ ಆಡಳಿತದಿಂದಾಗಿ ಜನರು ಪ್ರತಿದಿನ ನನ್ನ ಮನೆಗೆ ಬಂದು ದೂರು ನೀಡುತ್ತಿದ್ದಾರೆ. ಇವರು ಮಾಡುವ ಕೆಲಸಗಳಿಂದ ನಾನು ಸಚಿವನಾಗಿ ತಲೆತಗ್ಗಿಸುವಂತಾಗಿದೆ ಎಂದು ಕೃಷ್ಣ ಬೈರೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳೇ ಈ ಕೂಡಲೇ AC ಕಿರಣ್ನನ್ನು ಸಸ್ಪೆಂಡ್ ಮಾಡಿ, ಈತ ಮಾಡಿರುವ ಅವ್ಯವಹಾರಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸಿ. ಒಂದು ವೇಳೆ ಎರಡು ದಿನದ ಒಳಗೆ ಈ ಬೆಂಗಳೂರು ಉತ್ತರ ವಿಭಾಗದ ಎಸಿ ಕಿರಣ್ ಸಸ್ಪೆಂಡ್ ಆಗದಿದ್ದರೆ ಬಿಟಿವಿ ಮಾತ್ರ ಸುಮ್ಮನೆ ಬಿಡುವುದಿಲ್ಲ. ಕಿರಣ್ ಸಸ್ಪೆಂಡ್ ಆಗುವರೆಗೂ ಬಿಟಿವಿ ಅಭಿಯಾನ ಮುಂದುವರಿಸುತ್ತದೆ.
ಇದನ್ನೂ ಓದಿ : ದೂರು ಸ್ವೀಕರಿಸಿ ಕ್ರಮ ಕೈಗೊಳ್ಳದಿದ್ದರೆ ಇನ್ಸ್ಪೆಕ್ಟರ್ ಮೇಲೆ ಕ್ರಮ – ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ!







