ನವದೆಹಲಿ : CBI ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ಸಮಿತಿ ನಿರ್ಣಯದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಆಯ್ಕೆ ಸಮಿತಿಯು ಕಳಂಕಿತ ಅಧಿಕಾರಿಗಳ ಪಟ್ಟಿ ನೀಡಿಲ್ಲ ಎಂದು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಈ ಸಂಬಂಧ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಲೋಕಸಭೆ ವಿಪಕ್ಷ ನಾಯಕ ಅಂದ್ರೆ ರಬ್ಬರ್ ಸ್ಟ್ಯಾಂಪ್ ಅಲ್ಲ ಮತ್ತು ಈ ಪಕ್ಷಪಾತದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪದೇ ಪದೇ ಲಿಖಿತ ಮನವಿಗಳ ಹೊರತಾಗಿಯೂ ಅರ್ಹ ಅಭ್ಯರ್ಥಿಗಳ ಸಮಗ್ರ ವರದಿಗಳನ್ನು ನನಗೆ ಒದಗಿಸಿಲ್ಲ ಎಂದು ರಾಹುಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸಮಿತಿ ಸಭೆಯಲ್ಲಿ ಮೊದಲ ಬಾರಿಗೆ ಅರವತ್ತೊಂಬತ್ತು ಅಭ್ಯರ್ಥಿಗಳ ಮೌಲ್ಯಮಾಪನ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಸಮಗ್ರ ವರದಿಯನ್ನು ನನಗೆ ನೀಡಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯ ಇತಿಹಾಸ ಮತ್ತು ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಈ ದಾಖಲೆಗಳ ವಿವರವಾದ ಪರಿಶೀಲನೆಯು ನಿರ್ಣಾಯಕವಾಗಿದೆ ಎಂದರು.

“ಯಾವುದೇ ಕಾನೂನು ಆಧಾರವಿಲ್ಲದೆ ಈ ಉದ್ದೇಶಪೂರ್ವಕ ಮಾಹಿತಿ ನಿರಾಕರಣೆಯು ಆಯ್ಕೆ ಪ್ರಕ್ರಿಯೆಯನ್ನು ಅಣಕಿಸುತ್ತದೆ ಮತ್ತು ನಿಮ್ಮ ಪೂರ್ವ ನಿರ್ಧಾರಿತ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಖಚಿತಪಡಿಸುತ್ತದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಮೂವರು ಸದಸ್ಯರ ಆಯ್ಕೆ ಸಮಿತಿಯು ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿದೆ.

“ಭಾರತದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಬಿಐ ಅನ್ನು ನಿಮ್ಮ ಸರ್ಕಾರ ಪದೇ ಪದೇ ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳು, ಪತ್ರಕರ್ತರು ಮತ್ತು ಟೀಕಾಕಾರರನ್ನು ಗುರಿಯಾಗಿಸಿಕೊಂಡಿದೆ. ಅಂತಹದನ್ನು ತಡೆಗಟ್ಟುವ ಸಲುವಾಗಿಯೇ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಲಾಗಿದೆ. ವಿಷಾದಕರವೆಂದರೆ, ಈ ಪ್ರಕ್ರಿಯೆಯಲ್ಲಿ ನೀವು ನನಗೆ ಯಾವುದೇ ಅರ್ಥಪೂರ್ಣ ಜವಾಬ್ದಾರಿಯನ್ನು ನಿರಾಕರಿಸುತ್ತಲೇ ಬಂದಿದ್ದೀರಿ ಎಂದು ಮೇ 5, 2025 ರಂದು ನಡೆದ ಹಿಂದಿನ ಸಭೆಯಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದಾಗಿ ಗಾಂಧಿ ಹೇಳಿಕೊಂಡಿದ್ದಾರೆ.
ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಗೆ ಕ್ರಮಗಳನ್ನು ಸೂಚಿಸಿ, ಅಕ್ಟೋಬರ್ 21, 2025 ರಂದು ನಿಮಗೆ ಪತ್ರ ಬರೆದಿದ್ದೆ, ಆದರೆ ಅದಕ್ಕೆ ನನಗೆ ಪ್ರತಿಕ್ರಿಯೆಯೂ ಬಂದಿಲ್ಲ. ಆಯ್ಕೆ ಸಮಿತಿಯ ನಿರ್ಣಾಯಕ ಮಾಹಿತಿಯನ್ನು ನಿರಾಕರಿಸುವ ಮೂಲಕ ಸರ್ಕಾರ ಅದನ್ನು ಕೇವಲ ಔಪಚಾರಿಕತೆಗೆ ಇಳಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ : ಕನ್ನಡದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ!









