ಜಿ.ಕೆ. ಮುದ್ದುರಾಜ್ ನಿರ್ದೇಶನದ “ಎಜುಕೇಟಡ್ ಬುಲ್ಸ್” ಟ್ರೈಲರ್ ರಿಲೀಸ್!

ಕಳೆದ ನಾಲ್ಕು ದಶಕಗಳಿಂದ ಡಾ.ಅಂಬರೀಷ್, ದೇವರಾಜ್, ಜಗ್ಗೇಶ್, ಶಶಿಕುಮಾರ್ ಮುಂತಾದ ಸ್ಟಾರ್ ನಟರ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಹಿರಿಯ ತಂತ್ರಜ್ಞ ಜಿ.ಕೆ. ಮುದ್ದುರಾಜ್ ಅವರು ಹತ್ತು ವರ್ಷಗಳ ನಂತರ ನಿರ್ದೇಶಿಸಿರುವ ಚಿತ್ರ ಎಜುಕೇಟಡ್ ಬುಲ್ಸ್. ಈ ಚಿತ್ರದ ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಜೊತೆಗೆ ಎಂ.ಎಸ್. ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ.

ಮುದ್ದುರಾಜ್ ಅವರ ನಿರ್ದೇಶನದ 41ನೇ ಚಿತ್ರ ಇದಾಗಿದ್ದು ಇದರ ಟ್ರೈಲರ್ – ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ನೀರಜ್, ಪೂರ್ವಿಕಾ (ಸ್ವಪ್ನ) ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದು, ಅಜಯ್‌ ಕುಮಾರ್, ತೇಜಸ್‌ಕುಮಾರ್, ರಾಕೇಶ್ ಅಲ್ಲದೆ ಪಾಪ ಪಾಂಡು ಖ್ಯಾತಿಯ ಚಿದಾನಂದ್, ಹಿರಿಯ ನಟಿ ಭವ್ಯ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕ ಮುದ್ದುರಾಜ್ ಅವರು, ಎಜುಕೇಟೆಡ್ ಬುಲ್ಸ್ ಎಂದರೆ ವಿದ್ಯಾವಂತ ಗೂಡೆಗಳು ಎಂದರ್ಥ. ಎಲ್ಲಾ ಕಲಾವಿದರು ಹೊಸಬರು ಅನಿಸದ ಹಾಗೆ ಅಭಿನಯಿಸಿದ್ದಾರೆ. 4 ವರ್ಷಗಳ ಹಿಂದೆ ಇದೇ ಹೆಸರಿನಲ್ಲಿ ಸಿನಿಮಾ ಆರಂಭಿಸಿದ್ದೆ. ಆ ನಿರ್ಮಾಪಕರು ಹಿಂದೆ ಸರಿದು ಚಿತ್ರ ನಿಂತು ಹೋಯಿತು. ಆಮೇಲೆ ಬೇರೊಂದು ಕಥೆ ತೆಗೆದುಕೊಂಡು ನಿರ್ದೇಶಿಸಿ ನಾನೇ ನಿರ್ಮಾಣ ಸಹ ಮಾಡಿದ್ದೇನೆ. 4 ಜನ ವೆಲ್ ಎಜುಕೇಟೆಡ್ ಯುವಕರು, ಅವರಿಗೆ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು, ಹೀಗೇ ಇರಬೇಕು ಎಂಬ ಕನಸಿರುತ್ತದೆ‌. ಇವರ ಆಸೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ. ಹೀಗೇ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ತಾನೇ ಹೋಗ್ತಾರೆ. ವಿದ್ಯೆಯ ಜೊತೆ ಬುದ್ದಿ ಸ್ವಲ್ಪ ಜಾಸ್ತಿನೇ ಇರಬೇಕು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರವಿದು. ಸೆನ್ಸಾರ್ ಯು/ಎ ಕೊಟ್ಟಿದ್ದಾರೆ. ಸಾಂಗ್, ಡೈಲಾಗ್, ಕ್ಯಾಮೆರಾ ವರ್ಕ್ ತುಂಬಾ ಚೆನ್ನಾಗಿ ಬಂದಿದೆ. ಜನ ಇಷ್ಟಪಡುತ್ತಾರೆ ಎಂಬ ನಂಬಿಕೆಯಿದೆ. ನಿರ್ಮಾಪಕನಿಗೆ 50% ಆದರೂ ರಿಟರ್ನ್ ಆಗಬೇಕು, ಜನ ಕೊಡೋ 100 ರೂಪಾಯಿಗೆ ನ್ಯಾಯ ಒದಗಿಸಬೇಕು ಎನ್ನುವುದು ನನ್ನ ಪಾಲಿಸಿ. ನಾನು ಬಕೆಟ್ ಹಿಡಿದಿದ್ದರೆ 150 ಸಿನಿಮಾ ಮಾಡ್ತಿದ್ದೆ, ಒಂದಷ್ಟು ಜನರಿಗೆ ಸಿನಿಮಾ ತೋರಿಸಿದಾಗ ಎದ್ದುನಿಂತು ಕ್ಲಾಪ್ ಮಾಡಿದರು ಎಂದು ಹೇಳಿದರು.

ಕಂಗ್ರಾಚುಲೇಶನ್ಸ್ ಬ್ರದರ್ಸ್, ಬಿಚ್ಚುಗತ್ತಿ ಸೇರಿದಂತೆ 15 ಚಿತ್ರಗಳಿಗೆ ಮ್ಯೂಸಿಕ್ ಮಾಡಿದ್ದೇನೆ. ಇದು 16ನೇ ಚಿತ್ರ. 2 ಹಾಡುಗಳ ಜೊತೆ ಮೆಸೇಜ್, ಎಂಟರ್ ಟೈನ್ ಮೆಂಟ್ ಇರೋ ಚಿತ್ರವಿದು, ಹಿನ್ನೆಲೆ ಸಂಗೀತವನ್ನೂ ಮಾಡಿದ್ದೇನೆ ಎಂದು ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಹೇಳಿದರು.

ನಟ ಚಿದಾನಂದ್ ಅವರು, ಭಾಗ್ಯಲಕ್ಷ್ಮಿಗಾಗಿ ನಾವೆಲ್ಲ ಆಗ ಬರುತ್ತೆ, ಈಗ ಬರುತ್ತೆ ಅಂತ ಕಾಯ್ತಾ ಇರ್ತೇವೆ. ಈ ಚಿತ್ರ 25 ಕೋಟಿಯ ಆಸೆಯನ್ನು ಉಳಿಸುತ್ತೆ ಎಂದರು.

ನಾಯಕಿ ಪೂರ್ವಿಕಾ ಮಾತನಾಡಿ, ಹಳ್ಳಿಯ ಸಾಮಾನ್ಯ ಹುಡುಗಿಯಾಗಿ ನಟಿಸಿದ್ದೇನೆ. ಯೂಥ್ ಗೆ ಮೋಟಿವೇಶನ್ ಆಗೋ ಚಿತ್ರವಿದು ಎಂದರು. ಉಳಿದ ಕಲಾವಿದರೆಲ್ಲ ತಂತಮ್ಮ ಪಾತ್ರಗಳ ಕುರಿತಂತೆ ಸಂಕ್ಷಿಪ್ತವಾಗಿ ಹೇಳಿಕೊಂಡರು.

ರತಿಂದ್ ಗೌಡ ಅವರ ಛಾಯಾಗ್ರಹಣ, ಸಂಜೀವರೆಡ್ಡಿ ಅವರ ಸಂಕಲನ, ಎಂ.ಪಿ.ಅರುಣ್‌ಕುಮಾರ್ ಅವರ ಕಥೆ, ಹರೀಶ್ ಅವರ ಸಂಭಾಷಣೆ, ರಾಮ್ ನಾರಾಯಣ್ ಅವರ ಸಾಹಿತ್ಯ, ಥ್ರಿಲ್ಲರ್‌ ಮಂಜು ಅವರ ಸಾಹಸ, ಬಾಬು ಖಾನ್ ಅವರ ಕಲೆ, ಸಫೈರ್‌ ರವಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

Btv Kannada
Author: Btv Kannada

Leave a Comment

Read More

Read More