ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಕ್ರೇಜ್ ಅನ್ನು ಬಂಡವಾಳ ಮಾಡಿಕೊಂಡಿದ್ದ ಬೃಹತ್ ಟಿಕೆಟ್ ಬ್ಲಾಕ್ ದಂಧೆಯನ್ನು CCB ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯದಲ್ಲಿ ಸ್ವತಃ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಸದಸ್ಯನೇ ಭಾಗಿಯಾಗಿದ್ದು, ಇದೀಗ ಪೊಲೀಸರು ಇಬ್ಬರ ವಿರುದ್ಧ FIR ದಾಖಲಿಸಿದ್ದಾರೆ. KSCA ಸದ್ಯ ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ ಎಂಬುದು ಸಿಸಿಬಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸಿಸಿಬಿ ಡಿಸಿಪಿ ಹರಿಬಾಬು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲಕ್ಷ್ಮೀ ಕ್ಯಾಟರ್ಸ್ ಹೋಟೆಲ್ನ ಕ್ಯಾಪ್ಟನ್ ಚಂದ್ರಶೇಖರ್ ಎಂಬಾತ ಸಿಕ್ಕಿಬಿದ್ದಿದ್ದಾನೆ. 15 ಸಾವಿರ ರೂಪಾಯಿ ಬೆಲೆಯ ಟಿಕೆಟ್ಗಳನ್ನು ಈತ ಬರೋಬ್ಬರಿ 19 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಸೆರೆಹಿಡಿದಿದ್ದಾರೆ. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಆಘಾತಕಾರಿಯಾಗಿದ್ದು, ಕೆಎಸ್ಸಿಎ ಸದಸ್ಯ ಗಣೇಶ್ ಹರಿಕೇಶ್ ಎಂಬುವವರ ಹೆಸರನ್ನು ಬಾಯ್ಬಿಟ್ಟಿದ್ದಾನೆ.
ಗಣೇಶ್ ಹರಿಕೇಶ್ ಎರಡು ಖಾಸಗಿ ಕಂಪನಿಗಳ ಹೆಸರನ್ನು ಬಳಸಿಕೊಂಡು ಆನ್ಲೈನ್ನಲ್ಲಿ ನೂರಾರು ಟಿಕೆಟ್ಗಳನ್ನು ಮೊದಲೇ ಬುಕ್ ಮಾಡುತ್ತಿದ್ದ. ಬಳಿಕ ಚಂದ್ರಶೇಖರ್ ಮೂಲಕ ಅವುಗಳನ್ನು ಬ್ಲಾಕ್ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆರ್ಸಿಬಿಯ ಮೊದಲ ಪಂದ್ಯದಲ್ಲಿ ಇವರು 81 ಟಿಕೆಟ್ಗಳನ್ನು ಮಾರಾಟ ಮಾಡಿದ್ದರು. ಕಳೆದ ಪಂದ್ಯಕ್ಕೆ 100 ಟಿಕೆಟ್ಗಳನ್ನು ಸಿದ್ಧಪಡಿಸಿಕೊಂಡಿದ್ದರು. ಒಟ್ಟಾರೆಯಾಗಿ 17 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 181 ಟಿಕೆಟ್ಗಳನ್ನು ಖರೀದಿಸಿದ್ದು, ಅವುಗಳ ಪೈಕಿ 100 ಟಿಕೆಟ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದೆ.
ಚಂದ್ರಶೇಖರ್ ಅರೆಸ್ಟ್ ಆಗುತ್ತಿದ್ದಂತೆಯೇ ಗಣೇಶ್ ಹರಿಕೇಶ್ ಎಸ್ಕೇಪ್ ಆಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಟಿಕೆಟ್ ಪೂರೈಸಿದ ಜೀನಿ ಸೇರಿದಂತೆ ಎರಡು ಖಾಸಗಿ ಸಂಸ್ಥೆಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ.









