ಬೆಂಗಳೂರು : ಎರಡೂವರೆ ವರ್ಷದ ನಂತರ ನಗರದ ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಕಾಲ ಸನ್ನಿಹಿತವಾಗಿದೆ. ಈ ತಿಂಗಳಾಂತ್ಯದಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ.
ನಗರದ ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 5 ಕಿಮೀ ಉದ್ದದ ಮೇಲ್ಸೇತುವೆಯಲ್ಲಿಎರಡೂವರೆ ವರ್ಷದ ಹಿಂದೆ ಬಸ್ಗಳು ಮತ್ತು ಟ್ರಕ್ಗಳು ಸೇರಿ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಫ್ಲೈಓವರ್ನಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. 102-103ನೇ ಪಿಲ್ಲರ್ ನಡುವೆ 3 ಕೇಬಲ್ ಬಾಗಿದ್ದರಿಂದ ಆತಂಕ ಮನೆ ಮಾಡಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್ಗಳ ಅಳವಡಿಕೆ ಕಾರ್ಯ ನಡೆದಿದೆ.
ಹೊಸ 240 ಪ್ರಿಸ್ಟ್ರೆಸ್ಡ್ ಕೇಬಲ್ ಅಳವಡಿಸಲಾಗಿದ್ದು, ಈಗಾಗಲೇ ಅಳವಡಿಸಲಾಗಿದ್ದ 1,243 ಪ್ರಿಸ್ಟ್ರೆಸ್ಡ್ ಕೇಬಲ್ಗಳ ಬದಲಾವಣೆ ಕಾರ್ಯ ನಡೆದಿದೆ. ಒಂದು ವರ್ಷದಲ್ಲಿ 900 ಕೇಬಲ್ ಬದಲಾವಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ವಾರದಲ್ಲಿ ಒಂದು ದಿನ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಬೇಕು ಅಂತ ತಜ್ಞರ ಸಮಿತಿ ಶಿಫಾರಸು ನೀಡಿದ್ದು, ಶುಕ್ರವಾರ ಮುಂಜಾನೆ 6 ಗಂಟೆಯಿಂದ ಶನಿವಾರ ಮುಂಜಾನೆ 6 ಗಂಟೆಯವರೆಗೆ ಭಾರೀ ವಾಹನಗಳಿಗೆ ನಿಷೇಧ ವಿಧಿಸುವ ಸಾಧ್ಯತೆ ಇದೆ. ಮೇಲ್ಸೇತುವೆ ಮೇಲೆ ವಾಹನಗಳ ಗರಿಷ್ಠ ವೇಗ ಮಿತಿಯನ್ನು 40 ಕಿ.ಮೀ.ಗೆ ನಿಗದಿ ಮಾಡಲಾಗಿದೆ.
ಫ್ಲೈಓವರ್ ನಿರ್ಬಂಧದಿಂದ ಕಳೆದಎರಡೂವರೆ ವರ್ಷಗಳಿಂದ ಕೆಳಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ದಿನ ನಿತ್ಯದ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದರು. ಸದ್ಯ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಈ ತಿಂಗಳಾಂತ್ಯದಲ್ಲಿ ಭಾರಿ ವಾಹನ ಸಂಚಾರಕ್ಕೆ ಮೇಲ್ಸೇತುವೆ ಮುಕ್ತವಾಗುವ ಸಾಧ್ಯತೆ ಇದೆ.
Post Views: 327