ಬೆಂಗಳೂರು : ಬೆಂಗಳೂರು ಜಲಮಂಡಳಿಯಲ್ಲಿ ಬೋನಸ್ ವಿಚಾರಕ್ಕೆ ತಾರತಮ್ಯ ನಡೆಯುತ್ತಿದ್ದು, ಇದನ್ನು ಖಂಡಿಸಿ BWSSB ಚೇರ್ಮನ್ ವಿರುದ್ಧ ಹಿರಿಯ ವಕೀಲ ಎಸ್. ಬಾಲನ್ ಕಿಡಿ ಕಾರಿದ್ದಾರೆ.

ಈ ಬಗ್ಗೆ ಹಿರಿಯ ವಕೀಲ ಎಸ್. ಬಾಲನ್ ಮಾತನಾಡಿ, ನಾವು ಸುಮಾರು ನಾಲ್ಕು ಸಾವಿರ ಕಾರ್ಮಿಕರಿದ್ದೇವೆ. ನ್ಯಾಯಯುತವಾಗಿ ಬರಬೇಕಾದ ಬೋನಸ್ ಕೇಳಲು ಹೋದರೆ, ಚೇರ್ಮನ್ ಅವರು ನೀವು ದಲಿತರು, ಹಿಂದುಳಿದ ವರ್ಗದವರು, ನೀವು ಯುಗಾದಿ ಹಬ್ಬವನ್ನೆಲ್ಲ ಆಚರಿಸಬಾರದು ಎಂದು ಅವಮಾನಿಸುತ್ತಾರೆ ಎಂದಿದ್ದಾರೆ.

ಅಧಿಕಾರಿಗಳು ತಲಾ 4 ಲಕ್ಷ ರೂಪಾಯಿಗಳ ಬೋನಸ್ ಪಡೆಯುತ್ತಿದ್ದಾರೆ. ಕಾಯಂ ಕಾರ್ಮಿಕರು ಕೇವಲ 40 ಸಾವಿರ ರೂಪಾಯಿ ಬೋನಸ್ ಪಡೆಯುತ್ತಿದ್ದಾರೆ. ಆದರೆ ರಾತ್ರಿ-ಹಗಲು ದುಡಿಯುವ ಗುತ್ತಿಗೆ ಕಾರ್ಮಿಕರಿಗೆ ಪೈಸೆ ಬೋನಸ್ ಇಲ್ಲ ಎಂದು ಗುಡುಗಿದ್ದಾರೆ.

ಗುತ್ತಿಗೆ ಕಾರ್ಮಿಕರ ಬಾಯಿಗೆ ಮಣ್ಣು ಹಾಕುತ್ತೇನೆ ಎಂದು ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಅಂತಹ ಅಧಿಕಾರಿಯ ಕಚೇರಿಗೆ ಹಾಗೂ ಚೇರ್ಮನ್ ಕಚೇರಿಯೊಳಗೆ ಮಲ-ಮೂತ್ರ ಸುರಿಯುತ್ತೇವೆ. ಈ ಬಗ್ಗೆ ಪೋಸ್ಟರ್ ಹಂಚುತ್ತೇವೆ ಎಂದು ಹಿರಿಯ ವಕೀಲ ಎಸ್. ಬಾಲನ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಳೆದ 8-9 ತಿಂಗಳಿಂದ ನಿರಂತರವಾಗಿ ಸಭೆ ನಡೆಸುತ್ತಿದ್ದರೂ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗುತ್ತಿಗೆ ಪದ್ಧತಿ ರದ್ದುಪಡಿಸಿ ಕಾರ್ಮಿಕರಿಗೆ ನೇರ ವೇತನ ನೀಡಬೇಕು. ಬೋರ್ಡ್ ಮೀಟಿಂಗ್ನಲ್ಲಿ ಭರವಸೆ ನೀಡಿದಂತೆ ಒಂದು ತಿಂಗಳ ವೇತನವನ್ನು ಬೋನಸ್ ಆಗಿ ನೀಡಬೇಕು. ಕಾರ್ಮಿಕರಿಗೆ ಕನಿಷ್ಠ ಕ್ಯಾಂಟೀನ್ ಸೌಲಭ್ಯ ಒದಗಿಸಬೇಕು. 2016ರಲ್ಲಿ ಸಲ್ಲಿಸಿದ ಅರ್ಜಿಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ : http://ಏ.10ಕ್ಕೆ ಜಯರಾಮ್ ಕಾರ್ತಿಕ್ ನಟನೆಯ “ಕಾಡ” ಚಿತ್ರ ರಿಲೀಸ್!









