ಇತ್ತೀಚಿಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವಿಚಾರ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಸದ್ಯ ಪ್ರಜ್ವಲ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ನಡುವೆ ಪೆನ್ಡ್ರೈವ್ ಶೀರ್ಷಿಕೆ ಅಡಿಯಲ್ಲಿ ಸಿನಿಮಾವೊಂದು ಬರುತ್ತಿದೆ. ಆದರೆ, ಈ ಚಿತ್ರಕ್ಕೂ ಅವರ ಕಥೆಗೂ ಯಾವುದೇ ಲಿಂಕ್ ಇಲ್ಲ ಎಂದು ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಹೇಳಿದ್ದಾರೆ. ನಾಳೆಯೇ ಈ ಚಿತ್ರದ ಶೀರ್ಷಿಕೆ ಅನಾವರಣವಾಗಲಿದೆ.
ಲಯನ್ ಆರ್. ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್ ನಿರ್ಮಿಸುತ್ತಿರುವ ‘ಪೆನ್ಡ್ರೈವ್’ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯಿಸುತ್ತಿದ್ದಾರೆ ಅನ್ನೋದೆ ವಿಶೇಷ. ರಾಧಿಕಾ, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಭಾಗ್ಯ, ಗೀತಪ್ರಿಯಾ, ಗೀತಾ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಾಳೆ ಬೆಳಿಗ್ಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಆಗಲಿದೆ.
ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಈ ಚಿತ್ರದ ಟೈಟಲ್ನ ಅನಾವರಣ ಮಾಡಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದ ತನಿಷಾ ಕುಪ್ಪಂಡ ಅವರು ‘ಬಿಗ್ ಬಾಸ್’ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದರು. ಈ ಕಾರಣದಿಂದಲೇ ಅವರಿಗೆ ಪೆನ್ಡ್ರೈವ್ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿದೆ.
ಈ ಸಿನಿಮಾದ ಬಗ್ಗೆ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡಿದ್ದಾರೆ. ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಮಾಡಬೇಕು ಎನ್ನುವ ಆಲೋಚನೆ ಮೊದಲೇ ಇತ್ತು. ಆದರೆ, ಟೈಟಲ್ ರಿಜಿಸ್ಟರ್ ಮಾಡಿರಲಿಲ್ಲ. ಈಗ ಪೆನ್ಡ್ರೈವ್ ವಿಚಾರ ಚರ್ಚೆಯಲ್ಲಿರುವುದರಿಂದ ಸ್ವಲ್ಪ ಬೇಗ ಸಿನಿಮಾ ಮಾಡಬೇಕು ಎನಿಸಿತು ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಶೆಡ್ನಲ್ಲಿ ಮತ್ತೊಂದು ಮರ್ಡರ್ - ದರ್ಶನ್ ಕೇಸ್ ಎಫೆಕ್ಟ್ನಿಂದ ಕೊಲೆ ಅಡ್ಡೆಯಾಗ್ತಿವೆ ಶೆಡ್..!