ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ. ನಿರ್ಮಿಸಿರುವ, “ದ ಸೂಟ್” ಚಿತ್ರದ ಯಶಸ್ಸಿನ ನಂತರ ಎಸ್ ಭಗತ್ ರಾಜ್ ನಿರ್ದೇಶನದಲ್ಲಿ ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ ಪ್ರವೀಣ್ “ಠಾಣೆ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ವಿದೂಷಿ ಹರಿಣಾಕ್ಷಿ , ಬಿ.ವಿ.ರಾಜರಾಂ, ಬಾಲ್ ರಾಜ್ವಾಡಿ, ರೋಹಿತ್ ನಾಗೇಶ್, ಕುಲದೀಪ್, ಸಂತೋಷ್ ಕರ್ಕಿ, ಭೀಷ್ಮ ರಾಮಯ್ಯ, ನಾಗರಾಜ್, ಪಿ.ಡಿ.ಸತೀಶ್ ಚಂದ್ರ, ಪ್ರವೀಣ್ ಜಾನ್, ಪೂಜಾ ರಾವ್, ರೂಪ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.
20 ವರ್ಷಗಳ ಹಿಂದೆ ಮಾಧ್ಯಮಗಳು, ಪೋಲೀಸ್ ಇಲಾಖೆಗಳ ಪ್ರಮಾಣ ಕಡಿಮೆ ಇದ್ದ ಕಾರಣ ಜನರೇ ನ್ಯಾಯಕ್ಕಾಗಿ ಹೋರಾಡಿ ಇಲಾಖೆಗಳ ಗಮನ ಸೆಳೆಯುವ ಕಾಲದಲ್ಲಿ ನಾಯಕ ಕಾಳಿ ನ್ಯಾಯಕ್ಕಾಗಿ ಯಾವ ರೀತಿಯ ಹೋರಾಟ ಮಾಡಿದ ಎನ್ನುವುದೇ ‘ಠಾಣೆ C/O ಶ್ರೀರಾಂಪುರ’ ಚಿತ್ರದ ಕಥೆಯಾಗಿದೆ.
ಚಿತ್ರದ ಮೂರು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಅವರು ಸಂಗೀತ ನೀಡಿದ್ದಾರೆ. ಮಜಾ ಟಾಕೀಸ್ ರೇಮೋ ಹಾಡುಗಳ ರಚನೆ ಮಾಡಿದ್ದು, ರಾಜೇಶ್ ಕೃಷ್ಣ, ಮಾನಸ ಹೊಳ್ಳ ಹಾಗೂ ರಿಯಾಲಿಟಿ ಶೋ ನಾ ಮಕ್ಕಳು ಹಾಡಿ ಗಮನ ಸೆಳೆದಿದ್ದಾರೆ. ಪ್ರಶಾಂತ್ ಸಾಗರ್ ಛಾಯಾಗ್ರಹಣ, ಹಿರಿಯ ಸಂಕಲನಕಾರ ಸುರೇಶ್ ಅರಸ್ ಸಂಕಲನ, ಸಹ ನಿರ್ದೇಶನ ದಾವಣಗೆರೆ ರವಿಚಂದ್ರ, ನಿರ್ಮಾಣ ನಿರ್ವಹಣೆ ರವಿಚಂದ್ರ ಅವರದ್ದು ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವು ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. ನಾಯಕ ಪ್ರವೀಣ್ ಅವರು ಭರ್ಜರಿಯಾಗಿ ಆಕ್ಷನ್ ಮಾಡಿದ್ದಾರೆ. ಮಾರ್ಚ್ ತಿಂಗಳಲ್ಲಿ ಲೇಖ ಆಡಿಯೋ ಸಂಸ್ಥೆಯಿಂದ ‘ಠಾಣೆ’ಯ ಧ್ವನಿ ಸುರುಳಿ ಬಿಡುಗಡೆಯಾಗಲಿದೆ.









