ಬೆಂಗಳೂರು : ಕುಡಿತದ ಚಟಕ್ಕೆ ದಾಸನಾಗಿದ್ದ ಮಗನಿಗೆ ಬುದ್ದಿವಾದ ಹೇಳಿದ್ದಕ್ಕೆ ತಂದೆಯನ್ನೇ ಚಾಕು ಇರಿದು ಹತ್ಯೆಗೈದಿರುವ ಘಟನೆ ಬ್ಯಾಡರಹಳ್ಳಿಯ ಬಾಲಾಜಿ ಲೇಔಟ್ನಲ್ಲಿ ನಡೆದಿದೆ. ಚನ್ನಬಸವಯ್ಯ ಮೃತ ತಂದೆ.
26 ವರ್ಷದ ಮಗ ಅಮಿತ್ ಕೆಲಸ ಕಾರ್ಯ ಇಲ್ಲದ ಕುಡಿತದ ಚಟಕ್ಕೆ ದಾಸನಾಗಿದ್ದ. ಬಿಎಸ್ಎಫ್ ನಿವೃತ್ತ ಯೋಧನಾಗಿದ್ದ ತಂದೆ ಚನ್ನಬಸವಯ್ಯ ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡಿ ಮಗನನ್ನ ಸಾಕುತ್ತಿದ್ದರು.
ಮಗ ಅಮಿತ್ ಯಾವಾಗಲೂ ಕುಡಿದು ಬಂದು ತಂದೆ-ತಾಯಿಗೆ ಕಿರುಕುಳ ಕೊಡುವುದರ ಜೊತೆಗೆ ಕುಡಿಯಲು ಹಣ ಕೊಡುವಂತೆ ಪೀಡಿಸ್ತಿದ್ದ. ಕುಡಿಯಲು ಹಣ ಇಲ್ಲದಿದ್ದಾಗ ತಾಯಿಯ ಚಿನ್ನದ ಬಳೆ, ಕಿವಿಯೋಲೆ ಕೇಳ್ತಿದ್ದ. ಅಷ್ಟೇ ಅಲ್ಲದೇ ಮಾಂಗಲ್ಯ ಸರವನ್ನು ಕೂಡ ಕಿತ್ತುಕೊಳ್ಳಲು ಮುಂದಾಗಿದ್ದ.
ಪ್ರತಿದಿನ ಈ ವಿಚಾರಕ್ಕೆ ತಂದೆ-ಮಗನಿಗೆ ಗಲಾಟೆ ಆಗ್ತಿತ್ತು. ನಿನ್ನೆ ಸಹ ಇದೇ ವಿಚಾರಕ್ಕೆ ಗಲಾಟೆ ಶುರುವಾಗಿ ಕುಡಿತದ ಚಟದಿಂದ ಮುಕ್ತಿ ಹೊಂದಿ ಕೆಲಸ ಮಾಡು ಅಂತ ಚನ್ನಬಸವಯ್ಯ ಮಗನಿಗೆ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಮಗ ಅಮಿತ್, ತಂದೆ ಎದೆಗೆ ಚಾಕುವಿನಿಂದ ಭೀಕರವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಲ್ಲಿ ಬಿದ್ದಿದ್ದ ಚನ್ನಬಸವಯ್ಯನನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಸದ್ಯ ಕೇಸ್ ದಾಖಲಿಸಿಕೊಂಡು ಆರೋಪಿ ಅಮಿತ್ನನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ತಂದೆಗೆ ಚಾಕು ಇರಿದ ಅಮಿತ್ ವಿಚಾರಣೆ ನಡೀತಿದೆ. ಘಟನೆ ಅಚಾನಕ್ಕಾಗಿ ಆಯ್ತಾ. ಇಲ್ಲ ಕೊಲೆ ಮಾಡ್ಲೇ ಬೇಕು ಅಂತಾ ಅಮಿತ್ ಪ್ಲಾನ್ ಮಾಡಿದ್ನಾ ಅನ್ನೋದು ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ.









