“ವೀರ ಕನ್ನಡಿಗ”, ” ಮ್ಯಾಜಿಕ್ ಅಜ್ಜಿ” ಸೇರಿದಂತೆ ಮೂವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ಶರ್ಮ ಸಂಗೀತ ನಿರ್ದೇಶಕನಾಗಿಯೂ ಜನಪ್ರಿಯ. ನೂರಕ್ಕೂ ಅಧಿಕ ಧಾರಾವಾಹಿ ಹಾಗೂ ಟಿವಿ ಶೋ ಗಳಿಗೂ ಸಂಗೀತ ನೀಡಿರುವ ಕಾರ್ತಿಕ್ ಶರ್ಮ ಪ್ರಸ್ತುತ “ಭಾವಾಂತರ” ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

ನೈಜ ಘಟನೆ ಆಧರಿಸಿರುವ ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಇತ್ತೀಚಿಗೆ ಟೀಸರ್ ಬಿಡುಗಡೆಯಾಗಿದ್ದು, ಆಡಿಯೋ ಹಕ್ಕನ್ನು ಹೊಂಬಾಳೆ ಮ್ಯೂಸಿಕ್ ಸಂಸ್ಥೆ ಪಡೆದುಕೊಂಡಿದೆ.

ನಿರ್ದೇಶಕ, ನಟ ಕಾರ್ತಿಕ್ ಶರ್ಮ ಅವರು, ಬಾಲನಟನಾಗಿ ಹಾಗೂ ಸಂಗೀತ ಸಂಯೋಜಕನಾಗಿ ಪರಿಚಿತನಾಗಿದ್ದ ನಾನು, “ಭಾವಾಂತರ” ಸಿನಿಮಾ ಮೂಲಕ ನಿರ್ದೇಶಕನಾಗಿದ್ದೇನೆ. ನನ್ನ ಆರಂಭದ ದಿನಗಳಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹ ಈಗಲೂ ಮುಂದುವರೆಯಲಿ. “ಭಾವಾಂತರ”, ಇದೊಂದು ನೈಜ ಘಟನೆ ಆಧಾರಿತ ಚಿತ್ರ. ನನಗೆ ತಿಳಿದ ಹಾಗೆ ದಕ್ಷಿಣ ಭಾರತದಲ್ಲೇ ಈ ರೀತಿಯ ಕಥೆ ಈವರೆಗೂ ಬಂದಿಲ್ಲ. ಅಂತಹ ಅಪರೂಪದ ಕಥಾಹಂದರ ಹೊಂದಿರುವ ಚಿತ್ರವಿದು. ಚಿತ್ರದಲ್ಲಿ ನಾನೇ ಸಂಗೀತ ಸಂಯೋಜಿಸಿರುವ ಐದು ಹಾಡುಗಳಿದ್ದು, ಹೆಸರಾಂತ ಹೊಂಬಾಳೆ ಮ್ಯೂಸಿಕ್ ಸಂಸ್ಥೆ ಆಡಿಯೋ ಹಕ್ಕು ಪಡೆದುಕೊಂಡಿದೆ ಎಂದಿದ್ದಾರೆ.

ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಆದಷ್ಟು ಬೇಗ ಬಿಡುಗಡೆಯಾಗಲಿದೆ. ನನ್ನ ಜೊತೆಗೆ ತನ್ವಿ ರಾವ್ ಅವರು ಸಹ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್, ಭಾನು ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಿಕ್ ಮೀಡಿಯಾ ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಾಗರ್ ಅತ್ದ್ಕರ್ ಛಾಯಾಗ್ರಹಣ ಹಾಗೂ ಆಶೀಷ್ ಹುಲಕುಂದ್ ಸಂಕಲನವಿದೆ ಎಂದು ಕಾರ್ತಿಕ್ ಶರ್ಮ ತಿಳಿಸಿದ್ದಾರೆ.

ಇದನ್ನೂ ಓದಿ : ಮೀನುಗಾರಿಕಾ ಬೋಟ್ ಮುಳುಗಡೆ – 7 ಮಂದಿ ಪ್ರಾಣಾಪಾಯದಿಂದ ಪಾರು!









