ಬೆಂಗಳೂರು : ನೀವು ಶ್ರೀರಾಮನ ಹೆಸರಲ್ಲಿ ರಾಜಕೀಯ ಮಾಡ್ತಿದ್ದೀರಿ, ರಾಜಕಾರಣಕ್ಕಾಗಿ ಮಂದಿರ ಬಳಕೆ ಮಾಡ್ತಿದ್ದೀರಿ. ನಾವು ಶ್ರೀ ರಾಮಚಂದ್ರನ ವಿರೋಧಿಗಳಲ್ಲ, ಶ್ರೀರಾಮನಿಗಾಗಿ ನಾನೂ ಗುಡಿ ಕಟ್ಟಿದ್ದೇನೆ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಬಿಜೆಪಿ ಮಂದಿರ ರಾಜಕೀಯವನ್ನು ನಾವು ವಿರೋಧಿಸಿದ್ದೇವೆ. ಕೇಂದ್ರ ಸಚಿವರು ನಮ್ಮ ನಿರ್ಧಾರವನ್ನು ರಾಜಕಾರಣ ಮಾಡ್ತಿದ್ದಾರೆ, ರಾಜಕೀಯ ಮಾತನಾಡೋರಿಗೆ ಔಷಧವಿಲ್ಲ. ಶ್ರೀರಾಮಚಂದ್ರನನ್ನು ನಾವು ಗೌರವಿಸುತ್ತೇವೆ, ಪೂಜೆ ಮಾಡ್ತೀವಿ, ಭಜನೆ ಮಾಡ್ತೀವಿ, ರಾಮಮಂದಿರಕ್ಕೆ ವಿರೋಧಿಲ್ಲ, ಶಂಕರ ಪೀಠಗಳನ್ನು ದೂರವಿಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.
ಇನ್ನೂ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್-X ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
ಹೈಕಮಾಂಡ್ ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ನಾಯಕರ ತೀರ್ಮಾನ ಸರಿಯಾಗಿದೆ, ನಾನು ಬೆಂಬಲಿಸುತ್ತೇನೆ. ಜಾತಿ, ಧರ್ಮ, ಪಕ್ಷ-ಪಂಥ ಮೀರಿ ಸರ್ವರ ಒಳಗೊಂಡ ಕಾರ್ಯಕ್ರಮ ಬೇಕು. ಭಕ್ತಿ,ಗೌರವದ ಕಾರ್ಯಕ್ರಮ ಒಂದು ಪಕ್ಷದ ಕಾರ್ಯಕ್ರಮ ಆಗಬಾರದು ಎಂದಿದ್ದಾರೆ.
ಬಿಜೆಪಿ ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದೆ. ಇದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹ. ಬಿಜೆಪಿ ಮತ್ತು RSS ನಾಯಕರು ಅಪೂರ್ಣ ದೇಗುಲ ಉದ್ಘಾಟಿಸುತ್ತಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ, ಹಿಂದುತ್ವದ ಅಲೆ ಬಡಿದೆಬ್ಬಿಸಿ ತಮ್ಮ ವೈಫಲ್ಯ ಮುಚ್ಚುವ ಕೆಲಸ ಆಗ್ತಿದೆ. 30-35 ವರ್ಷಗಳಿಂದ ಬಿಜೆಪಿ ,ಸಂಘ ಪರಿವಾರ ರಾಮನ ರಾಜಕೀಯ ಮಾಡಿದೆ. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ನಾವು ಮಾಡಲ್ಲ, ಶ್ರೀರಾಮನ ಮೇಲೆ ನಂಬಿಕೆ, ಭಕ್ತಿ ಇದ್ದವರು ಪ್ರತಿದಿನ ಸ್ಮರಿಸುತ್ತಾರೆ.
ಯಾವುದೇ ಧರ್ಮ ಇನ್ನೊಂದು ಧರ್ಮವನ್ನು ದ್ವೇಷಿಸುವುದಿಲ್ಲ. ಸಂವಿಧಾನದ ಆಶಯಕ್ಕೆ ನಾನು ಮತ್ತು ನಮ್ಮ ಪಕ್ಷ ಬದ್ಧ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ನಾಯಕರಿಗೆ ಆ ರಾಮನೇ ಒಳ್ಳೆಯ ಬುದ್ಧಿ ಕೊಡಲಿ; BSY..