ಬಾರ್ಬಡೋಸ್ : ದ್ವೀಪ ರಾಷ್ಟ್ರ ವೆಸ್ಟ್ ಇಂಡೀಸ್ನ ಬಾರ್ಬಡೋಸ್ ಬ್ರಿಡ್ಜ್ ಟೌನ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಇದೀಗ ವೆಸ್ಟ್ ಇಂಡೀಸ್ಗೆ ಡೇಂಜರಸ್ ‘ಬೆರಿಲ್’ ಸೈಕ್ಲೋನ್ ಅಪ್ಪಳಿಸುತ್ತಿದ್ದು, ಟೀಂ ಇಂಡಿಯಾ ಸದಸ್ಯರು ಹಲವು ದಿನಗಳವರೆಗೆ ಬಾರ್ಬಡೋಸ್ನಲ್ಲಿ ಸಿಲುಕುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, T20 ವಿಶ್ವಕಪ್ ಫೈನಲ್ನಲ್ಲಿ ಟೀಂ ಇಂಡಿಯಾ ಗೆದ್ದ ಕೆಲವೇ ಗಂಟೆಗಳ ನಂತರ ಭಾನುವಾರ ಬೆಳಿಗ್ಗೆ ‘ಬೆರಿಲ್’ ಸೈಕ್ಲೋನ್ ವರ್ಗ ಗ್ರೇಡ್ 3 ಸೈಕ್ಲೋನಾಗಿ ಪರಿವರ್ತನೆಗೊಂಡಿದೆ. ಈ ಹಿನ್ನೆಲೆ ಬಾರ್ಬಡೋಸ್ನಲ್ಲಿ ಉಳಿದುಕೊಂಡಿರುವ ರೋಹಿತ್ ಪಡೆಗೆ ಹೋಟೆಲ್ನಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ವಿಮಾನ ಸೇರಿದಂತೆ ಎಲ್ಲಾ ಸಂಚಾರ ಸಂಪರ್ಕ ಬಂದ್ ಮಾಡಲಾಗಿದ್ದು, ಮುಂದಿನ 24 ಗಂಟೆಯಲ್ಲಿ ಸೈಕ್ಲೋನ್ ಬಾರ್ಬಡೋಸ್ಗೆ ಅಪ್ಪಳಿಸಲಿದೆ ಎಂದು ವರದಿಯಾಗಿದೆ.
ಈ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಹೋಟೆಲ್ನಲ್ಲೇ ಇರಲು ಟೀಂ ಇಂಡಿಯಾ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಹೊರಬಂದರೆ ಬಿರುಗಾಳಿ-ಮಳೆಯ ಹೊಡೆತಕ್ಕೆ ಸಿಲುಕುವ ಆತಂಕ ಶುರುವಾಗಿದೆ. ಬೃಹತ್ ಅಲೆಗಳು ಅಟ್ಲಾಂಟಿಕ್ ಸಾಗರದಿಂದ ಅಪ್ಪಳಿಸಲಿದ್ದು, ಸದ್ಯ ಗಂಟೆಗೆ 210 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ತಿಳಿದು ಬಂದಿದೆ.
ಸೈಕ್ಲೋನ್ ಬಾರ್ಬಡೋಸ್ನಿಂದ 400 ಕಿಮೀ ದೂರದಲ್ಲಿದ್ದು, ಈ ಹಿನ್ನೆಲೆ ಬ್ರಿಡ್ಜ್ಟೌನ್ನ ಏರ್ಪೋರ್ಟ್ ಸಂಪೂರ್ಣ ಬಂದ್ ಮಾಡಲಾಗಿದೆ. ಟೀಂ ಇಂಡಿಯಾ ಜೊತೆ 70 ಮಂದಿಯಿದ್ದು, ಈಗಾಗಲೇ ಎಮಿರೇಟ್ಸ್ ವಿಮಾನದ ಮೂಲಕ ರೋಹಿತ್ ಶರ್ಮಾ ಪಡೆ ವಾಪಸ್ ಆಗಬೇಕಿತ್ತು. ನ್ಯೂಯಾರ್ಕ್ನಲ್ಲಿ ವಿಮಾನವೇರಿ ದುಬೈ ಮೂಲಕ ತವರಿಗೆ ಬರ್ಬೇಕಿತ್ತು. ಇದೀಗ ಸೈಕ್ಲೋನ್ ಸಿಲುಕಿ ಹಲವು ದಿನಗಳವರೆಗೆ ಟೀಂ ಇಂಡಿಯಾ ಬಾರ್ಬಡೋಸ್ನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಇನ್ನು ಚಾರ್ಟರ್ಡ್ ಫ್ಲೈಟ್ ಮೂಲಕ ಟೀಂ ಇಂಡಿಯಾದ 70 ಮಂದಿಯನ್ನು ಕರೆಸಲು ಬಿಸಿಸಿಐ ಪ್ಲಾನ್ ಮಾಡಿದ್ದು, ಪ್ರಧಾನಿ ಮೋದಿ ಜೊತೆ ಚರ್ಚಿಸಿ ಚಾರ್ಟರ್ಡ್ ವಿಮಾನ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ. ಬ್ರಿಡ್ಜ್ಟೌನ್ನಿಂದ ದೆಹಲಿಗೆ ಕರೆಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.