ಬೆಂಗಳೂರು : ಆಟೋ ಪಾರ್ಕಿಂಗ್ ವಿಚಾರವಾಗಿ ಗಲಾಟೆ ಪ್ರಕರಣ ಸಂಬಂಧ ಸಂಸದ ಪ್ರತಾಪ್ ಸಿಂಹಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಈ ಗಲಾಟೆ ಪ್ರಕರಣಕ್ಕೆ ಕೋಮು ತಿರುವು ನೀಡಿ ಟ್ವೀಟ್ ಮಾಡಿದ್ದ ಆರೋಪ ಕೇಳಿಬಂದಿದೆ.
ಈ ಬಗ್ಗೆ ಪ್ರತಾಪ್ ಸಿಂಹ WAKE UP HINDUS ಎಂದು ಟ್ವೀಟ್ ಮಾಡಿದ್ದರು. ಇದೀಗ ಪ್ರಕರಣ ಸಂಬಂಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದು, ಕಾನೂನಾತ್ಮಕವಾಗಿ ಪರಿಶೀಲಿಸಲಾಗುತ್ತಿದೆ. ಪರಿಶೀಲನೆ ವೇಳೆ ತಪ್ಪು ಕಂಡುಬಂದರೆ ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಚುನಾವಣಾ ಆಯೋಗವೂ ಸಹ ಈ ಬಗ್ಗೆ ಮಾಹಿತಿ ಪಡೆದಿದೆ.
ಪ್ರಕರಣದ ಹಿನ್ನೆಲೆ : ಭಾನುವಾರ ರಾತ್ರಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಸಂಭವಿಸಿದೆ. ಎರಡೂ ಕುಟುಂಬಗಳೂ ಬೇರೆ ಬೇರೆ ಧರ್ಮದವರಾದ ಕಾರಣ ಕೋಮು ಸಂಘರ್ಷದ ಉದ್ವಿಗ್ನತೆಯ ವದಂತಿ ಹರಿದಾಡಿತ್ತು.
ಕುಮಾರಸ್ವಾಮಿ ಲೇಔಟ್ ಏರಿಯಾದ ಅಕ್ಕಪಕ್ಕದ ನಿವಾಸಿಗಳಾದ ಶಿವಕುಮಾರ್ ಹಾಗೂ ಸೈಯದ್ ತಾಹ ಎಂಬ ಇಬ್ಬರು ಆಟೋ ಪಾರ್ಕಿಂಗ್ ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಶಿವಕುಮಾರ್ ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿಕೊಂಡಿದ್ದರು. ಸೈಯದ್ ತಾಹ ಮನೆಯ ಮುಂದೆ ಆತನ ಸಂಬಂಧಿ ಆಟೋ ನಿಲ್ಲಿಸಿದ್ದ. ವೇಗವಾಗಿ ಬಂದು ಆಟೋ ನಿಲ್ಲಿಸಿದ್ದಕ್ಕೆ ತಾಹ ಸಂಬಂಧಿಯನ್ನು ಪಕ್ಕದ ಮನೆ ನಿವಾಸಿ ಶಿವಕುಮಾರ್ ಹಾಗೂ ಕುಟುಂಬಸ್ಥರು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಪರಸ್ಪರ ಗಲಾಟೆ ನಡೆಯುತ್ತಿದ್ದಾಗ ಘಟನಾ ಸ್ಥಳಕ್ಕೆ ಬಂದಿದ್ದ ಅಪರಿಚಿತ ವ್ಯಕ್ತಿ ಪಕ್ಕದಲ್ಲೇ ಇದ್ದ ಮಸೀದಿಯಿಂದ ಜೊತೆಗಾರರ ಜೊತೆ ಬಂದು ಮತ್ತೆ ಗಲಾಟೆ ನಡೆಸಿದ್ದಾನೆ. ಈ ಕಾರಣಕ್ಕೆ ಶಿವಕುಮಾರ್ ಮನೆಗೆ ನುಗ್ಗಿ ಅನ್ಯಕೋಮಿನ ಗುಂಪಿನಿಂದ ಹಲ್ಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.
ಟ್ವೀಟ್ ಡಿಲೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ : ಇನ್ನು ಗಲಾಟೆ ನಡೆದ ಕೆಲವೇ ಗಂಟೆಗಳಲ್ಲಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. “wakeup Hindus” ಎಂದು ಟ್ವಿಟ್ ಮಾಡಿದ್ದರು. ಗಲಾಟೆ ವೇಳೆ ಸೆರೆ ಹಿಡಿಯಲಾದ ದೃಶ್ಯ ಸಮೇತ ಟ್ವೀಟ್ ಮಾಡಿ ಈ ಘಟನೆ ನಡೆದಿರುವುದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ. ಈ ಘಟನೆಯ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದರ ಗಮನಕ್ಕೂ ತಂದಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಸಂಸದ ಟ್ವೀಟ್ ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ರಾತ್ರೋರಾತ್ರಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ : ಲೋಕಸಭೆ ಚುನಾವಣೆ : ಚಿಕ್ಕಬಳ್ಳಾಪುರದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ವಶಕ್ಕೆ..!