ಹಾಸನ : ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯ ಹಂತದಲ್ಲಿರುವಾಗಲೇ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಆರೋಪ ಮಾಡಿದ ಯುವಕನ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಅಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧವೂ ಸಹ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ಅರಕಲಗೂಡು ಜೆಡಿಎಸ್ ಕಾರ್ಯಕರ್ತನ ಮೇಲೆ ಸೂರಜ್ ರೇವಣ್ಣ ಅವರು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪದಿಂದ ರೇವಣ್ಣ ಕುಟುಂಬ ಮತ್ತೆ ಮುಜುಗರಕ್ಕೀಡಾದಂತಾಗಿದೆ.
ಸೂರಜ್ ರೇವಣ್ಣ ಅವರು ಜೂನ್ 16ರ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತನಿಗೆ ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲ್ಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಲ್ಲಿ ಯುವಕ ಉಲ್ಲೇಖಿಸಿದ್ದಾನೆ. ಆದರೆ ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿದೆ. ಅರಕಲಗೂಡು ಮೂಲದ ಕಾರ್ಯಕರ್ತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಡಾ. ಸೂರಜ್ ರೇವಣ್ಣ ಪರ ಶಿವಕುಮಾರ್ ಎಂಬುವವರು ದೂರು ನೀಡಿದ್ದಾರೆ.
ಯುವಕ 5 ಕೋಟಿಗೆ ಡಿಮ್ಯಾಂಡ್ ಮಾಡಿ, ಬ್ಲಾಕ್ಮೇಲ್ ಮಾಡಿದ್ದಾಗಿ ಸೂರಜ್ ರೇವಣ್ಣ ಪರ ಆಪ್ತ ಶಿವಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಲಿಂಗ ಕಾಮ ಆರೋಪಿಸಿ ಹಣಕ್ಕಾಗಿ ಡಿಮ್ಯಾಂಡ್ ಹಾಗೂ ಕುಟುಂಬದ ಮರ್ಯಾದೆ ಹಾಳು ಮಾಡಲು ಬೆದರಿಕೆ ಆರೋಪಿಸಿ ದೂರು ನೀಡಿದ್ದಾರೆ. ಡಾ. ಸೂರಜ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಇದೊಂದು ಸುಳ್ಳು ಆರೋಪ ಎಂದು ಸೂರಜ್ ಆಪ್ತ ಶಿವಕುಮಾರ್ ಹೊಳೆನರಸೀಪುರ ಠಾಣೆಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಸೂರಜ್ ರೇವಣ್ಣ ಈ ಪ್ರಕರಣದಲ್ಲಿ ಯಾವ ತಪ್ಪನ್ನೂ ಮಾಡಿಲ್ಲ. ಕೇವಲ ಕೆಲಸ ಕೊಡಿಸಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿದೆ. ಅಲ್ಲದೆ, ಹಣ ಕೊಡದಿದ್ದ ಹಿನ್ನೆಲೆಯಲ್ಲಿ ಬೆದರಿಕೆ ಒಡ್ಡಲಾಗಿದೆ. ಅರಕಲಗೂಡು ಮೂಲದ ವ್ಯಕ್ತಿಯೊಬ್ಬ ಈ ರೀತಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾನೆ ಎಂದು ಶಿವಕುಮಾರ್ ತಾವು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು, ಲೈಂಗಿಕ ದೌರ್ಜನ್ಯ ಆಗಿದೆ ಎಂದು ಆರೋಪಿಸಿರುವ ವ್ಯಕ್ತಿ, ನನಗೆ ಕೆಲಸ ಬೇಕಿದೆ. ದಯಮಾಡಿ ಸೂರಜ್ ರೇವಣ್ಣನ ಬಳಿ ಕರೆದುಕೊಂಡು ಹೋಗಿ ಒಂದು ಕೆಲಸ ಕೊಡಿಸಿ ಎಂದು ನನಗೆ ದುಂಬಾಲು ಬಿದ್ದಿದ್ದ ಎಂದೂ ಶಿವಕುಮಾರ್ ವಿವರ ನೀಡಿದ್ದಾರೆ. ನಂತರ ಜೂನ್ 16ರಂದು ಚನ್ನರಾಯಪಟ್ಟಣ ತಾಲೂಕಿನ ಗನ್ನಿಗಡದ ತೋಟದ ಮನೆಗೆ ಹೋಗಲು ಹೇಳಿದ್ದೆ. ಅಲ್ಲಿ ಪೊಲೀಸರ ಮುಂದೆಯೇ ಕೆಲಸ ಬೇಕು ಎಂದು ಕೇಳಿದ್ದ. ಆಗ, ಸೂರಜ್ ರೇವಣ್ಣ ಅವರು ಈಗ ಯಾವುದೂ ಇಲ್ಲ. ನಂತರ ನೋಡೋಣ ಎಂದು ಹೇಳಿ ಕಳಿಸಿದ್ದರಂತೆ, ಎಂಬುದಾಗಿ ನಡೆದ ಘಟನೆಯನ್ನು ಶಿವಕುಮಾರ್ ವಿವರಿಸಿದ್ದಾರೆ.
ನಂತರ ಆತ, ನನಗೆ ಏನೂ ಕೆಲಸ ಕೊಡಿಸಲ್ಲ. ನಿಮ್ಮ ಬಾಸ್ ಕೆಲಸ ಕೊಡಿಸಲ್ಲ. ನನಗೆ ತುಂಬಾ ಕಷ್ಟ ಇದೆ. ನನಗೆ ಹಣ ಬೇಕು. ನೀನು ನಿಮ್ಮ ಬಾಸ್ರಿಂದ ನನಗೆ ಐದು ಕೋಟಿ ರೂ. ಹಣ ಕೊಡಿಸದಿದ್ದರೆ ಅವರ ವಿರುದ್ಧ ಲೈಂಗಿಕ ದೌರ್ಜನದ ದೂರು ಕೊಡ್ತೀನಿ, ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ ಆರೋಪದಲ್ಲಿ ಯುವಕನ ಮೇಲೆ FIR ದಾಖಲಾಗಿದ್ದು, ಹೊಳೆನಸೀಪುರ ಪೊಲೀಸರು ಸೆಕ್ಷನ್ 384, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮಂಗಳೂರು : ಪತ್ನಿಯನ್ನು ಕಟ್ಟಿ ಹಾಕಿ, ಪತಿಗೆ ಚೂರಿ ಇರಿದು ಮನೆ ದರೋಡೆ – ನಗದು, ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಎಸ್ಕೇಪ್..!