ಬೆಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಶಾಂತ್ ಎ. ತಿಮ್ಮಯ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದಿಢೀರ್ ಬೆಳವಣಿಗೆಯಲ್ಲಿ ಶಾಂತ್ ಎ. ತಿಮ್ಮಯ್ಯರನ್ನು ಅನರ್ಹಗೊಳಿಸಿ ಸರ್ಕಾರದ ಆದೇಶಿಸಿದ ಹಿನ್ನೆಲೆಯಲ್ಲಿ ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯ್ದೆ 1974ರ ಅನುಚ್ಛೇದ 4(2)ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೂ ISFನ ಪ್ರಧಾನ ಕಾರ್ಯದರ್ಶಿಯಾದ ಬಿ.ಪಿ ರವಿ ಅವರನ್ನು ಕೆಎಸ್ಪಿಸಿಬಿ ಯ ಅಧ್ಯಕ್ಷರನ್ನಾಗಿ ಅಧಿಕ ಪ್ರಭಾರದಲ್ಲಿರಿಸಿ ನಾಮ ನಿರ್ದೇಶನ ಮಾಡಿ ಅದೇಶಿಸಲಾಗಿದೆ.
ಇನ್ನು ಸರ್ಕಾರ ಪ್ರದತ್ತ ಅಧಿಕಾರ ಚಲಾಯಿಸಿ ಶಾಂತ್ ಎ ತಿಮ್ಮಯ್ಯರನ್ನು ಅನರ್ಹಗೊಳಿಸಿದೆ. ಈ ಮೊದಲು ಹುದ್ದೆಯಿಂದ ವಜಾಗೊಳಿಸಿದ್ದಕ್ಕೆ ಕಾನೂನಾತ್ಮಕ ಹೋರಾಟದಲ್ಲಿ ಶಾಂತ್ ಎ ತಿಮ್ಮಯ್ಯ ತಡೆ ತಂದಿದ್ದರು. ಈ ಮೂಲಕ ರಾಜ್ಯ ಸರ್ಕಾರದ ವಿರುದ್ಧವೇ ಕಾನೂನು ಸಮರ ಸಾರಿದ್ದರು.
ಶಾಂತ್ ಎ ತಿಮ್ಮಯ್ಯ ಕಾಂಗ್ರೆಸ್ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದು ಕೆಂಗಣ್ಣಿಗೆ ಗುರಿಯಾಗಿದ್ದರು. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಅನರ್ಹಗೊಂಡಿದ್ದರು. ಆದರೆ ಶಾಂತ್ ತಿಮ್ಮಯ್ಯ ಸರ್ಕಾರದ ವಿರುದ್ದವೇ ಸಮರ ಸಾರಿ ಅಧಿಕಾರವಧಿಯನ್ನು ಮತ್ತೆ ವಿಸ್ತರಿಸಿಕೊಂಡಿದ್ದರು. ಹಾಗೆ ನೋಡಿದರೆ 2024ರ ನವೆಂಬರ್ ವರೆಗೂ ಶಾಂತ ತಿಮ್ಮಯ್ಯ ಅವರ ಅಧಿಕಾರವಧಿಯಿದೆ. ಇದೀಗ ಈ ಬೆಳವಣಿಗೆಯ ಬೆನ್ನಲ್ಲೇ ಮತ್ತೆ ಕಾನೂನಾತ್ಮಕ ಹೋರಾಟಕ್ಕೆ ಶಾಂತ್ ಎ. ತಿಮ್ಮಯ್ಯ ಸಜ್ಜಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ತರಾಟೆ..!