ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಪ್ರಿ-ವೆಡ್ಡಿಂಗ್ ಸಮಾರಂಭದಲ್ಲಿ ಭಾಗಿಯಾಗಿದ್ದ ಆರ್ಆರ್ಆರ್ ಸಿನಿಮಾ ಖ್ಯಾತಿಯ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ಗೆ ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಅವಮಾನ ಮಾಡಿದ್ದಾರೆ ಎಂದು ರಾಮ್ ಚರಣ್ ಪತ್ನಿ ಉಪಾಸಾನ ಅವರ ಮೇಕಪ್ ಆರ್ಟಿಸ್ಟ್ ಜೆಬಾ ಹಸನ್ ವಿಡಿಯೋ ಪೋಸ್ಟ್ ಮಾಡಿ ಆರೋಪ ಮಾಡಿದ್ದಾರೆ.
ಗುಜರಾತ್ನ ಜಾಮ್ನಾನಗರದಲ್ಲಿ ನಡೆದ ಅಂಬಾನಿ ಪುತ್ರನ ಅದ್ಧೂರಿ ಸಮಾರಂಭದಲ್ಲಿ ದೇಶ-ವಿದೇಶದ ವಿವಿಧ ಗಣ್ಯರು, ಸ್ಟಾರ್ಸ್, ಕ್ರಿಕೆಟರ್ಸ್ ಭಾಗವಹಿಸಿದ್ದರು. ಈ ವೇಳೆ ಸ್ಟೇಜ್ ಮೇಲೆ ನಾಟು.. ನಾಟು ಡ್ಯಾನ್ಸ್ ಮಾಡಲು ಆ್ಯಂಕರಿಂಗ್ ಮಾಡುತ್ತಿದ್ದ ಶಾರುಖ್ ಖಾನ್ ಮೈಕ್ ಮೂಲಕ ಅನೌನ್ಸ್ ಮಾಡಿ ರಾಮ್ ಚರಣ್ ತೇಜ್ರನ್ನ ವೇದಿಕೆಗೆ ಕರೆಯುತ್ತಿರುತ್ತಾರೆ. ಆಗ ಮೈಕ್ನಲ್ಲಿ ರಾಮ್ ಚರಣ್ ಎಲ್ಲಿದಿಯಾ? ಎಂದು ಮೊದಲು ತಮಿಳಿನಲ್ಲಿ ಕರೆದು ಹಾಗೇ ಮಾತು ಮುಂದುವರೆಸಿದ ಶಾರುಖ್ ಖಾನ್, (ಸಾಪಡಾ ದಾ, ಸೋಕ್ಯಾಮಾ, ರೊಂಡ್ ಇಡ್ಲಿ) ಇಡ್ಲಿ ವಡಾ ಮೇಲೆ ಬಾ ಎಂದು ರಾಮ್ ಚರಣ್ಗೆ ಕರೆದಿದ್ದಾರೆ.
ರಾಮ್ ಚರಣ್ ಅವರನ್ನು ಈ ರೀತಿ ಕರೆದಿದ್ದರಿಂದ ಬೇಸರಗೊಂಡ ಚರಣ್ ಪತ್ನಿ ಉಪಾಸಾನ ಅವರ ಮೇಕಪ್ ಆರ್ಟಿಸ್ಟ್ ಜೆಬಾ ಹಸನ್ ಅವರು ಪ್ರಿ- ವೆಡ್ಡಿಂಗ್ ಸಮಾರಂಭವನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾರೆಂತೆ. ಅಲ್ಲದೇ ಆವತ್ತೆ ಆ ವಿಡಿಯೋವನ್ನು ತಮ್ಮ ಇನ್ಸ್ಟಾದ ಸ್ಟೋರಿಯಲ್ಲಿ ಶೇರ್ ಮಾಡಿ ಶಾರುಖ್ ವಿರುದ್ಧ ಬೇಸರಗೊಂಡಿದ್ದಾರೆ. ಇದೀಗ ಇದಕ್ಕೆ ನೆಟ್ಟಿಗರು ಸಹ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಶಾರುಖ್ ಖಾನ್ ತಮಾಷೆಗಾಗಿ ಹೀಗೆ ಕರೆದರೂ ಅಷ್ಟು ದೊಡ್ಡ ಸ್ಟಾರ್ ಹೀರೋಗೆ ವೇದಿಕೆಯಲ್ಲಿ ಅವಮಾನ ಮಾಡುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ದಕ್ಷಿಣ ಭಾರತದ ಬಗ್ಗೆ ಶಾರುಖ್ ಖಾನ್ಗೆ ಎಂತಹ ಸಣ್ಣ ಮನಸ್ಥಿತಿ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಕಿಂಗ್ ಖಾನ್ ಕ್ಷಮೆ ಕೇಳಬೇಕು ಎಂದು ರಾಮ್ ಚರಣ ಆಭಿಮಾನಿಗಳು ಆಗ್ರಹಿಸಿದ್ದಾರೆ.
ಇನ್ನು ಕೆಲವರು ರಾಮ್ಚರಣ್ ವೇದಿಕೆ ಏರಿದಾಗ ಶಾರುಖ್ ಖಾನ್ ಶಿರಬಾಗಿ ನಮಸ್ಕರಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಶಾರುಖ್ ಖಾನ್ ಸ್ವಭಾವ ಎಂಥದ್ದು ಎಂದು. ಸುಮ್ಮನೆ ವಿಷಯ ಗೊತ್ತಿಲ್ಲದೇ ಏನೇನೋ ಮಾತನಾಡಬೇಡಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಸ್ವಲ್ಪ ಕಾಯಿರಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ‘ರೋಜಿ’ ಸಿನಿಮಾದಲ್ಲಿ ಒರಟ ಪ್ರಶಾಂತ್..!