ಬೆಂಗಳೂರು : ಕೆ.ಆರ್.ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣಗೆ ಕಡೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಇಂದು ಸಂಜೆ ವೇಳೆಗೆ ಜೈಲಿನಿಂದ ರೇವಣ್ಣ ಬಿಡುಗಡೆಯಾಗಲಿದ್ದಾರೆ. ರೇವಣ್ಣಗೆ ಬೇಲ್ ಸಿಗ್ತಿದ್ದಂತೆ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿದ್ದು, ಪರಪ್ಪನ ಅಗ್ರಹಾರ ಜೈಲಿನ ಮುಂದೆ ರೇವಣ್ಣ ಬೆಂಬಲಿಗರು, ಅಭಿಮಾನಿಗಳು ಜಮಾಯಿಸಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜೆ ವೇಳೆ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂಜೆಯಾದ ಕಾರಣ ಕೋರ್ಟ್ ಸಮಯ ಮುಗಿದಿದ್ದರಿಂದ ಷರತ್ತು ಪೂರೈಸಲು ಸಾಧ್ಯವಾಗಿರಲಿಲ್ಲ. ಮೊದಲಿಗೆ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಜಾಮೀನು ಪ್ರತಿ ಪಡೆಯಬೇಕು. ಆ ಬಳಿಕ ಸಿಸಿಎಚ್ 42ರಲ್ಲಿ ಷರತ್ತುಗಳ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಷರತ್ತು ಪೂರೈಸಲು ರೇವಣ್ಣ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.
5 ಲಕ್ಷದ ಬಾಂಡ್, ಇಬ್ಬರು ವೈಯಕ್ತಿಕ ಶ್ಯೂರಿಟಿ ನೀಡಬೇಕು. 5 ಲಕ್ಷದ ಬಾಂಡ್ಗೆ ಸಹಿ ಮಾಡಿಸಿ ವಕೀಲರು ಕೋರ್ಟ್ಗೆ ತಲುಪಿಸಲಿದ್ದಾರೆ. ಎಸಿಎಂಎಂ ಕೋರ್ಟ್ 42ರಲ್ಲಿ ಈ ಎಲ್ಲಾ ಜಾಮೀನಿನ ಷರತ್ತು ಪೂರೈಸಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ರೇವಣ್ಣ ಜೈಲಿಂದ ಬಿಡುಗಡೆಯಾಗಲಿದ್ದಾರೆ.