ಬೆಂಗಳೂರು : ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಟೆಂಪಲ್ ರನ್ ಮುಂದುವರಿದಿದೆ. ಇಂದು (ಮೇ 23) ಅವರು ಬೆಂಗಳೂರಿನಿಂದ ಕಲಬುರಗಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ಅವರು, ಗಾಣಗಾಪುರ ದೇಗುಲಕ್ಕೆ ತೆರಳಿ ದತ್ತಾತ್ರೇಯ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕೆಲ ಅರ್ಚಕರ ಸಮೇತ ಗಾಣಗಾಪುರಕ್ಕೆ ರೇವಣ್ಣ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆಯೊಬ್ಬರನ್ನು ಅಪಹರಣ ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ರೇವಣ್ಣ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಮೇ 4ರಂದು ಬಂಧನಕ್ಕೊಳಗಾಗಿದ್ದ ಮೇ 13ರಂದು ಅವರಿಗೆ ಜಾಮೀನು ಸಿಕ್ಕಿತ್ತು. ಜಾಮೀನು ಸಿಕ್ಕ ಕೂಡಲೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಹೋಗಿದ್ದ ಅವರು, ಆನಂತರ ಅಲ್ಲಿಂದ ಬೆಂಗಳೂರಿನ ಜೆಪಿ ನಗರ, ಚಾಮರಾಜಪೇಟೆ, ಜಯನಗರ ಮುಂತಾದ ಕಡೆ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
ತದನಂತರ, ಮೇ 13ರ ರಾತ್ರಿಯೇ ಮೈಸೂರಿಗೆ ತೆರಳಿದ್ದ ಅವರು, ಅಲ್ಲಿ ಚಾಮುಂಡಿಬೆಟ್ಟಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು. ಆನಂತರದಲ್ಲಿ, ಆದಿಚುಂಚನಗಿರಿ ಮಠಕ್ಕೆ, ಅಲ್ಲಿಂದ ಶೃಂಗೇರಿಗೆ ತೆರಳಿ ದೇವರ ದರ್ಶನ ಮಾಡಿದ್ದರು. ಇದಾಗಿ ಕೆಲವು ದಿನಗಳ ನಂತರ, ಮತ್ತೊಂದು ಲೈಂಗಿಕ ಕಿರುಕುಳದ ಪ್ರಕರಣದಲ್ಲಿಯೂ ಅವರಿಗೆ ಜಾಮೀನು ಸಿಕ್ಕಿತ್ತು. ಮೊದಲು ಒಂದು ದಿನದ ಜಾಮೀನು ನೀಡಿದ್ದ ನ್ಯಾಯಾಲಯ, ಆನಂತರ ಮೇ 20ರವರೆಗೆ ಆ ಜಾಮೀನನ್ನು ಮುಂದುವರಿಸಿತು.
ಇದನ್ನೂ ಓದಿ : ಬಿಡುಗಡೆ ಆಯ್ತು “ಕಲ್ಕಿ 2898 AD” ಚಿತ್ರದ ಹೊಸ ಟೀಸರ್ – ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು ಗೊತ್ತಾ?