ನವದೆಹಲಿ : ವಾರಾಣಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ಬೆಳಗ್ಗೆ 11.40ಕ್ಕೆ ಅಭಿಜಿತ್ ಮುಹೂರ್ತದಲ್ಲಿ, ಆನಂದ ಯೋಗ ಶುಭ ಘಳಿಗೆಯಲ್ಲಿ ನಮೋ ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಮುನ್ನ ಕಾಶಿಯ ಕಾಲಭೈರವ ದೇಗುಲದಲ್ಲಿ ಮೋದಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನಾಮಪತ್ರ ಸಲ್ಲಿಸುವ ವೇಳೆ ಸುಮಾರು ಹನ್ನೆರಡು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದ್ದು, ಇದಲ್ಲದೇ ಬಿಜೆಪಿ ಮತ್ತು ಎನ್ಡಿಎಯ ಹಲವು ನಾಯಕರು ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ನಾಮಪತ್ರ ಸಲ್ಲಿಸುವ ಮುನ್ನಾ ದಿನವಾದ ಸೋಮವಾರ ಪ್ರಧಾನಿ ಮೋದಿ, ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 6 ಕಿ. ಮೀ ರೋಡ್ ಶೋ ನಡೆಸಿದ್ದಾರೆ. ‘ನಿಮ್ಮೆಲ್ಲರ ವಾತ್ಸಲ್ಯ ಮತ್ತು ಆಶೀರ್ವಾದ ಊಹೆಗೂ ನಿಲುಕದು. ನಾನು ತುಂಬಾ ಭಾವುಕನಾಗಿದ್ದೇನೆ. ನಿಮ್ಮ ಪ್ರೀತಿಯ ನೆರಳಿನಲ್ಲಿ 10 ವರ್ಷಗಳು ಹೇಗೆ ಕಳೆದವು ಎಂಬುದು ನನಗೆ ಅರ್ಥವಾಗಲಿಲ್ಲ’ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
5 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿರುವ ವಾರಾಣಸಿ ಹಲವು ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿಯವ ನಾಮಪತ್ರ ಸಲ್ಲಿಕೆ ವೇಳೆ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿರುವ ನಿರೀಕ್ಷೆಯಿದೆ. ವಾರಾಣಸಿಯಲ್ಲಿ ಜೂನ್ 1 ರಂದು 7ನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಕಣದಲ್ಲಿದ್ದಾರೆ.
ಇದನ್ನೂ ಓದಿ : ಹೆಚ್.ಡಿ ರೇವಣ್ಣ ಇಂದು ಜೈಲಿನಿಂದ ರಿಲೀಸ್..!