ಭಾರತದ ನೆರೆಯ ರಾಷ್ಟ್ರ ಬಾಂಗ್ಲಾ ದೇಶದಲ್ಲಿ ಶೇಖ್ ಹಸೀನಾ ಆಡಳಿತ ವಿರುದ್ಧ ಜನರು ದಂಗೆ ಎದ್ದಿದ್ದಾರೆ. ಶೇಖ್ ಹಸೀನಾ ಬಾಂಗ್ಲಾ ದೇಶದ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಓಡಿ ಬಂದಿದ್ದಾರೆ. ಶೇಖ್ ಹಸೀನಾ ಢಾಕಾ ಬಿಟ್ಟು ಭಾರತದ ಅಗ್ರರ್ತಲಾದಲ್ಲಿ ಬಂದಿಳಿದಿದ್ದಾರೆ.
ಪ್ರಧಾನಿ ಪದತ್ಯಾಗಕ್ಕಾಗಿ ವಿದ್ಯಾರ್ಥಿಗಳು ದಂಗೆ ಎದ್ದಿದ್ದು, ಸರ್ಕಾರ ಹುದ್ದೆಗಳಲ್ಲಿ ಮೀಸಲು ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಹೋರಾಟ ಹಿಂಸೆಯ ರೂಪ ಪಡೆದುಕೊಂಡು
ಬಾಂಗ್ಲಾದೇಶದಲ್ಲಿ ಅರಾಜಾಕತೆ ಸೃಷ್ಟಿಯಾಗಿದೆ. ಪ್ರತಿಭಟನಾಕಾರರು ಶೇಖ್ ಹಸೀನಾ ಅಧಿಕೃತ ನಿವಾಸದಲ್ಲಿ ಹುಡುಕಾಡಿದರು. ಈ ಹಿಂಸಾಚಾರದಲ್ಲಿ ಬಾಂಗ್ಲಾ ದೇಶದ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದಾಗಿ ಶೇಖ್ ಹಸೀನಾ ಅವರು ಭಾರತಕ್ಕೆ ಬಂದಿದ್ದಾರೆ.
ಮೀಸಲಾತಿಗೆ ಹೋರಾಟ ನಡೆಸುತ್ತಿದ್ದ ಉದ್ರಿಕ್ತರು ಪ್ರಧಾನಿ ನಿವಾಸಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಬಾಂಗ್ಲಾ ಸೇನೆ ಗಡುವು ನೀಡಿತ್ತು. ಹಾಗಾಗಿ ರಾಜೀನಾಮೆ ಕೊಟ್ಟು ಹಸೀನಾ ಭಾರತಕ್ಕೆ ಓಡಿ ಬಂದಿದ್ದಾರೆ. ತಿಪ್ರುರ ರಾಜಧಾನಿ ಅಗರ್ತಲಾಕ್ಕೆ ಬಂದಿಳಿದ ಹಸೀನಾ ದೆಹಲಿಯಲ್ಲಿ ರಾಜಕೀಯ ಆಶ್ರಯ ಕೋರಿದ್ದಾರೆ.
ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಸರ್ಕಾರಿ ಹುದ್ದೆಗಳಲ್ಲಿ ಶೇ.30ರಷ್ಟು ಹುದ್ದೆಗಳನ್ನು 1971ರ ಯುದ್ಧದ ಯೋಧರು, ಕುಟುಂಬಕ್ಕೆ ನೀಡಲು ನಿರ್ಧಾರ ಮಾಡಿದ್ದರು. ಈ ನಿರ್ಧಾರಕ್ಕೆ ಬಾಂಗ್ಲಾದೇಶದ ಯುವಜನತೆಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮೀಸಲಾತಿಯನ್ನು ಜಾರಿಗೊಳಿಸಿದರೆ ಹೊಸ ತಲೆಮಾರಿನ ಯುವಜನತೆಗೆ ಉದ್ಯೋಗ ಸಿಗಲ್ಲ ಎಂದು ಆಕ್ರೋಶ ಜೋರಾಗಿತ್ತು. ಅಂತಿಮವಾಗಿ ಬಾಂಗ್ಲಾ ದೇಶದಲ್ಲಿ ಶಾಂತಿ ಸ್ಥಾಪನೆಗೆ ಸೇನೆ ಮಧ್ಯಪ್ರವೇಶಿಸಿತ್ತು. ಸೇನೆಯ ಸೂಚನೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ.
ಬಾಂಗ್ಲಾ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ತೀವ್ರ ನಿಗಾ ವಹಿಸಿದ್ದು, ತಕ್ಷಣ ಕೊಲ್ಕತ್ತಾಕ್ಕೆ ತೆರಳುವಂತೆ BSF ಡಿಜಿಗೆ ಸೂಚನೆ ನೀಡಿದ್ದಾರೆ. ಬಾಂಗ್ಲಾದಿಂದ ನುಸುಳುಕೋರರು ಬಾರದಂತೆ ಭಾರತ ಹೈ ಅಲರ್ಟ್ ಆಗಿದೆ. ಯಾವುದೇ ಕ್ಷಣದಲ್ಲಿ ಪ್ರಧಾನಿ ನೇತೃತ್ವದಲ್ಲಿ ಉನ್ನತ ಸಭೆ ನಡೆಯಲಿದೆ. ಸಭೆಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ಅಜಿತ್ ದೋವಲ್, ಸೇನಾಪಡೆಗಳ ಮುಖ್ಯಸ್ಥರು ಕೂಡ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ..!