ಸದಾ ವಿವಾದಗಳ ಮೂಲಕವೇ ಸುದ್ದಿ ಆದ ನಟಿ ಪೂನಂ ಪಾಂಡೆ ಅವರು ಸತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸ್ವತಃ ಪೂನಂ ಪಾಂಡೆ ಖಾತೆ ಮೂಲಕ ಸಾವಿನ ವಿಚಾರ ತಿಳಿಸಲಾಗಿತ್ತು. ಆದರೆ, ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ಸಾವಿನ ಸುದ್ದಿ ಸುಳ್ಳಾಗಿದೆ. ತಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಪೂನಂ ಪಾಂಡೆ ಅವರೇ ಖುದ್ದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾಡೆಲ್ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದರು. ಜನವರಿ 2ರಂದು ಪೂನಂ ಪಾಂಡೆ ಅವರ ಸಾವಿನ ಸುದ್ದಿ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಪೂನಂ ಪಾಂಡೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಾನು ಸತ್ತಿಲ್ಲ.. ಜೀವಂತವಾಗಿದ್ದೇನೆ. ಗರ್ಭಕಂಠ ಕ್ಯಾನ್ಸರ್ನ ಜಾಗೃತಿಗಾಗಿ ಈ ರೀತಿಯ ಸುಳ್ಳು ಹೇಳಿದ್ದೇನೆ. ದಯಮಾಡಿ ಕ್ಷಮಿಸಿ. ಆದರೆ ನನ್ನ ಸಾವಿನ ಸುಳ್ಳು ಸುದ್ದಿಯಿಂದಾಗಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಪ್ರತಿಯೊಬ್ಬರು ಮಾತನಾಡಿದ್ದಾರೆ. ನಾನು ನನ್ನ ಸಾವಿನ ಬಗ್ಗೆ ಸುಳ್ಳು ಹೇಳಿದ್ದು ತಪ್ಪು. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಪೂನಂ ಪಾಂಡೆ ಮನವಿ ಮಾಡಿದ್ದಾರೆ.
ಸಾವಿನ ಸುದ್ದಿಗೆ ಪೂನಂ ಪಾಂಡೆ ಹೇಳಿದ್ದೇನು? ಎಲ್ಲರಿಗೂ ಹಾಯ್, ನಾನು ಪೂನಮ್. ನಾನು ಇಷ್ಟೆಲ್ಲಾ ದುಃಖವನ್ನ ಕೊಟ್ಟಿದ್ದಕ್ಕೆ ಕ್ಷಮಿಸಿ. ನನ್ನಿಂದ ತುಂಬಾ ಜನ ನೋವು ಅನುಭವಿಸಿದ್ದು, ಅವರಿಗೂ ಕ್ಷಮೆ ಕೋರುತ್ತೇನೆ. ನಾವು ಹೆಚ್ಚಾಗಿ ಮಾತನಾಡದೇ ಬಿಟ್ಟಿರುವ ವಿಷಯದ ಬಗ್ಗೆ, ಸರ್ವಿಕಲ್ ಕ್ಯಾನ್ಸರ್ನ ಬಗ್ಗೆ ಎಲ್ಲರೂ ಚರ್ಚಿಸುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು. ನಾನು ನನ್ನ ಸಾವಿನ ನಾಟಕವಾಡಿದ್ದೇನೆ.
ಇದು ಅತಿಯಾಯ್ತು ಅನ್ನೋದು ನನಗೂ ಗೊತ್ತು. ಆದ್ರೆ ದಿಢೀರ್ ಅಂತ ನಾವೆಲ್ಲರೂ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಮಾತಾಡ್ತಿದ್ದೇವೆ. ಅಲ್ವಾ? ಇದು ನಿಶಬ್ದವಾಗಿಯೇ ನಿಮ್ಮ ಜೀವವನ್ನ ತೆಗೆದುಕೊಳ್ಳುವ ರೋಗ. ಈ ರೋಗದ ಬಗ್ಗೆ ತುರ್ತಾಗಿ ಬೆಳಕು ಚೆಲ್ಲುವ ಅವಶ್ಯಕತೆ ಇತ್ತು. ನನ್ನ ಸಾವಿನ ಸುದ್ದಿ ಏನನ್ನ ಸಾಧಿಸಿದೆಯೋ ಅದರ ಬಗ್ಗೆ ನನಗೆ ಹೆಮ್ಮೆ ಇದೆ. ನನಗೆ ಏನೇ ಪ್ರಶ್ನೆ ಕೇಳಬೇಕೆಂದಿದ್ದರೂ ನಾನು ಲೈವ್ನಲ್ಲಿ ನಿಮಗೆ ಉತ್ತರಿಸ್ತೇನೆ.
ನಾನು ಜೀವಂತವಾಗಿದ್ದೇನೆ. ಸರ್ವಿಕಲ್ ಕ್ಯಾನ್ಸರ್ನಿಂದಾಗಿ ನಾನು ಸಾವನ್ನಪ್ಪಿಲ್ಲ. ದುರಾದೃಷ್ಟ ಅಂದ್ರೆ ಸರ್ವಿಕಲ್ ಕ್ಯಾನ್ಸರ್ನಿಂದ ಜೀವ ಕಳೆದುಕೊಂಡ ನೂರಾರು, ಸಾವಿರಾರು ಮಹಿಳೆಯರ ಬಗ್ಗೆ ನಾನು ಇದನ್ನೇ ಹೇಳೋದಕ್ಕಾಗಲ್ಲ. ಅದರ ಬಗ್ಗೆ ಅವ್ರೇನೂ ಮಾಡೋಕೆ ಆಗದೆ ಸಾವನ್ನಪ್ಪಿಲ್ಲ, ಬದಲಿಗೆ ಏನು ಮಾಡಬೇಕೆಂಬ ತಿಳುವಳಿಕೆಯೇ ಇಲ್ಲದಿದ್ದಕ್ಕೆ ಸಾವನ್ನಪ್ಪಿದ್ದಾರೆ. ಇತರೆ ಕ್ಯಾನ್ಸರ್ಗಳಂತೆ ಅಲ್ಲದೆ, ಸರ್ವಿಕಲ್ ಕ್ಯಾನ್ಸರ್ನ ತಡೆಯಬಹುದು ಅನ್ನೋದನ್ನ ಹೇಳೋದಕ್ಕೆ ನಾನಿಲ್ಲಿದ್ದೇನೆ. ನೀವು ಮಾಡಬೇಕಿರುವುದು, ನಿಮ್ಮ ಪರೀಕ್ಷೆಯನ್ನ ಮಾಡಿಸಿಕೊಳ್ಳುವುದು, ಹೆಚ್ಪಿವಿ ವ್ಯಾಕ್ಸಿನ್ನ ಹಾಕಿಸಿಕೊಳ್ಳುವುದು. ನಾವು ಇದನ್ನ, ಇದಕ್ಕಿಂತಲೂ ಹೆಚ್ಚಿನದನ್ನ ಮಾಡೋ ಮೂಲಕ ಈ ರೋಗಕ್ಕೆ ಇನ್ನೊಂದು ಜೀವ ಕೂಡ ಹೋಗದಂತೆ ತಡೆಯಲು ಸಾಧ್ಯವಿದೆ.
ಇದನ್ನೂ ಓದಿ : ಎಲ್.ಕೆ ಅಡ್ವಾಣಿಗೆ ‘ಭಾರತ ರತ್ನ’ ಘೋಷಣೆ – ಪ್ರಧಾನಿ ಮೋದಿ ಅಭಿನಂದನೆ..!