ವಯನಾಡು : ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ್ದ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಭೇಟಿ ನೀಡಿದ್ದಾರೆ. ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಧಾನಿ, ಸರ್ಕಾರ ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಕುರಿತು ಪರಿಶೀಲಿಸಿದ್ದಾರೆ.
ವೈಮಾನಿಕ ವೀಕ್ಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಾಥ್ ನೀಡಿದ್ದಾರೆ. ಪ್ರಧಾನಿ ಮೋದಿ ಆಕಾಶದಿಂದಲೇ ಅಳಿದುಳಿದ ಮೆಪ್ಪಾಡಿ ವೀಕ್ಷಣೆ ಮಾಡಿದ್ದಾರೆ. ಬಳಿಕ ಅಧಿಕಾರಿಗಳಿಂದ ವೈಮಾನಿಕ ಸಮೀಕ್ಷೆಯಲ್ಲೇ ಮಾಹಿತಿ ಪಡೆದು, ಕೈನಲ್ಲಿ ಐಫ್ಯಾಡ್ ಹಿಡಿದು ಗೂಗಲ್ ಮ್ಯಾಪ್ ವಿಡಿಯೋ ವೀಕ್ಷಿಸಿದ್ದಾರೆ. ವೈಮಾನಿಕ ವೀಕ್ಷಣೆ ನಂತರ ದುರಂತ ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಕಳೆದ ಜು.30 ರಂದು ವಯನಾಡಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅನೇಕರು ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಇದು ಕೇರಳಕ್ಕೆ ಅಪ್ಪಳಿಸಿದ ಅತಿದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ.
ವಿಪತ್ತು ಪೀಡಿತ ಪ್ರದೇಶಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸಿಕೊಡಲು ಕೇರಳ ಸರ್ಕಾರ, ಕೇಂದ್ರದ ಬಳಿ 2,000 ಕೋಟಿ ರೂ. ನೆರವು ನೀಡುವಂತೆ ಮನವಿ ಮಾಡಿತ್ತು. ಈ ಬೆನ್ನಲ್ಲೇ ಖುದ್ದು ಪ್ರಧಾನಿ ಅವರೇ ಭೇಟಿ ನೀಡಿ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ.
ಇದನ್ನೂ ಓದಿ : ‘ಓ ಏ ಲಡ್ಕಿ’ ಸ್ಟೈಲಿಷ್ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ರಾಗಿಣಿ ದ್ವಿವೇದಿ..!