ಕಲಬುರಗಿ : ಕಬ್ಬು ಅರೆಯುವ ಪರವಾನಗಿ ಪಡೆಯದೇ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯೂ ಪಡೆಯದೇ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದನ್ನು ಆಕ್ಷೇಪಿರುವ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರು, 24 ಗಂಟೆಯಲ್ಲಿ ಉತ್ತರ ನೀಡುವಂತೆ ಸಿದ್ಧಸಿರಿ ಸೌಹಾರ್ದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಸಿದ್ಧಸಿರಿ ಸೌಹಾರ್ದ ಸಹಕಾರಿಯ ಸಿದ್ಧಸಿರಿ ಎಥೆನಾಲ್ ಮತ್ತು ವಿದ್ಯುತ್ ಘಟಕದಲ್ಲಿ ಕಬ್ಬು ನುರಿಸಲು ಮುಂದಾಗಿರುವುದು ಸರಿಯಲ್ಲ. ಅನುಮತಿ ಕೋರಿ ಸಲ್ಲಿಸಿದ ಅರ್ಜಿಗೆ ಅಗತ್ಯ ದಾಖಲಾತಿ ಸಲ್ಲಿಸದೇ ಅಪೂರ್ಣವಾಗಿರುವ ಕುರಿತು ತಮಗೆ ಲಿಖಿತ ಮಾಹಿತಿ ನೀಡಿ, ಸೂಕ್ತ ದಾಖಲೆ ಒದಗಿಸಿ ಕಬ್ಬು ಅರೆಯುವ ಅನುಮತಿ ಪಡೆಯುವಂತೆ ನಿಮಗೆ ಸೂಚಿಸಲಾಗಿತ್ತು.
ಆದರೂ ನೀವು ಅನುಮತಿ ಪಡೆಯದೇ ಕಬ್ಬು ನುರಿಸಲು ಪ್ರಾರಂಭಿಸಿದ್ದೀರಿ. ಇದು ಕಬ್ಬು (ನಿಯಂತ್ರಣ) ಆದೇಶ 1966ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕಬ್ಬು ಅರಿಯುವ ಪರವಾನಗಿ ನವೀಕರಿಸಿಕೊಳ್ಳದೇ ಕಬ್ಬು ರಸ ಮತ್ತು ಸಕ್ಕರೆ ರಸದಿಂದ ಎಥೆನಾಲ್ ಉತ್ಪಾದಿಸಿದ ನಿಮ್ಮ ವಿರುದ್ದ ಏಕೆ ಮೊಕದ್ದಮೆ ದಾಖಲಿಸಬಾರೆಂದು ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ಜನವರಿ 24ರಂದು ಈ ಕುರಿತು ಸಮಜಾಯಿಷಿ ಅಥವಾ ಉತ್ತರ ನೀಡುವಂತೆ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಪತ್ರ ಬರೆಯಲಾಗಿತ್ತು. ಆದರೂ ಈವರೆಗೂ ಉತ್ತರ ಅಥವಾ ಸಮಜಾಯಿಷಿ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯ 24ಗಂಟೆಯಲ್ಲಿ ನೋಟಿಸ್ ಗೆ ಉತ್ತರಿಸುವಂತೆ ಪತ್ರದಲ್ಲಿ ಉಲ್ಲೆಖಿಸಲಾಗಿದೆ. ಇಲ್ಲದಿದ್ದರೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ವೃದ್ಧರಿಗೆ ‘ಅನ್ನ ಸುವಿಧಾ’ ಯೋಜನೆ ಘೋಷಿಸಿದ ರಾಜ್ಯ ಸರ್ಕಾರ – ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಆಹಾರ ಧಾನ್ಯ..!