ಬೆಂಗಳೂರು : ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಪೊಲೀಸರು, ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನು ನಿನ್ನೆ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಕೂಡ ಹಗರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಇಬ್ಬರನ್ನೂ ಸುದೀರ್ಘಕಾಲ ವಿಚಾರಣೆ ನಡೆಸಲಾಗಿದೆ. ಹಣ ವರ್ಗಾವಣೆ ಪ್ರಕರಣದಲ್ಲಿ ಇಬ್ಬರ ಪಾತ್ರದ ಕುರಿತು ವಿಚಾರಣೆ ನಡೆಸಲು ಜುಲೈ 5ರಂದು ನೋಟಿಸ್ ಜಾರಿಗೊಳಿಸಿದ್ದ ಎಸ್ಐಟಿ, ಖುದ್ದು ವಿಚಾರಣೆಗೆ ಬರುವಂತೆ ಸೂಚಿಸಿತ್ತು. ನಿನ್ನೆ ವಿಚಾರಣೆ ವೇಳೆ ಹಗರಣದ ಸಂಬಂಧ ತನಿಖಾಧಿಕಾರಿಗಳು ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ಗೊತ್ತಾಗಿದೆ.
ಎಸ್ಐಟಿ ಮುಖ್ಯಸ್ಥ ಮನೀಶ್ ಖರ್ಬೀಕರ್ ಅವರ ನೇತೃತ್ವದಲ್ಲಿ ನಿನ್ನೆ ನಡೆದ ವಿಚಾರಣೆಯಲ್ಲಿ ತನಿಖಾಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇಬ್ಬರ ಹೇಳಿಕೆಯನ್ನೂ ವಿಡಿಯೊ ರೆಕಾರ್ಡ್ ಮಾಡಲಾಗಿದೆ. ‘ಬೆಳಿಗ್ಗೆ 11ರ ಸುಮಾರಿಗೆ ಸಿಐಡಿ ಕಚೇರಿಗೆ ಬಂದ ಬಿ.ನಾಗೇಂದ್ರ ಅವರನ್ನು ಸತತ 8 ಗಂಟೆ SIT ವಿಚಾರಣೆ ನಡೆಸಿದೆ.
ಈಗಾಗಲೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ನೆಕ್ಕಂಟಿ ನಾಗರಾಜ್ ಹಾಗೂ ಅವರ ಸಂಬಂಧಿ ನಾಗೇಶ್ವರ ರಾವ್ ಅವರು ನಿಮಗೆ ಹೇಗೆ ಪರಿಚಯ? ನೆಕ್ಕಂಟಿ ನಾಗರಾಜ್ ಅವರು ನಿಮ್ಮ ಆಪ್ತರೇ? ಹಣ ವರ್ಗಾವಣೆಯ ಮಾಹಿತಿಯನ್ನು ನಿಮಗೆ ನೀಡಲಾಗಿತ್ತೇ’ ಎಂಬ ಪ್ರಶ್ನೆಗಳನ್ನು SIT ತನಿಖಾಧಿಕಾರಿಗಳು ಬಿ.ನಾಗೇಂದ್ರಗೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರು ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ನಾಗೇಂದ್ರ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಲಾಗಿದ್ದು, ಕೆಲವು ಪ್ರಶ್ನೆ ಕೇಳಿದಾಗ ನಾಗೇಂದ್ರ ಅವರು ಮೌನವಾಗಿದ್ದರು. ಮತ್ತೆ ಕೆಲವು ಪ್ರಶ್ನೆಗಳಿಗೆ, ‘ನನಗೆ ಗೊತ್ತಿಲ್ಲ, ಮಾಹಿತಿ ಇಲ್ಲ’ ಎಂಬುದಾಗಿ ಉತ್ತರಿಸಿದ್ದಾರೆ’ ಎಂದು ಗೊತ್ತಾಗಿದೆ.
ಆಡಿಯೊ ಹಾಗೂ ವಿಡಿಯೊ ಸಾಕ್ಷ್ಯಗಳನ್ನೂ ತೋರಿಸಿ ಅವರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ಹೇಳಿವೆ. ಡೀಲ್ ಸಂಭಾಷಣೆ ವಿಡಿಯೋ ಸ್ಫೋಟ ನಂತರ ವಿಚಾರಣೆ ಚುರುಕುಗೊಳಿಸಿರುವ ತನಿಖಾಧಿಕಾರಿಗಳು, “ಮಾಜಿ ಸಚಿವ ನಾಗೇಂದ್ರ SIT ಮುಂದೆ ಸರಿಯಾದ ಮಾಹಿತಿ ನೀಡಿಲ್ಲ, ನಾಗೇಂದ್ರ ಹೇಳಿಕೆಗಳಿಂದ ಅಧಿಕಾರಿಗಳಿಗೆ ನಂಬಿಕೆ ಬಂದಿಲ್ಲ. ಹೀಗಾಗಿ ಇಂದು ಮತ್ತೆ ನಾಗೇಂದ್ರಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚಿಸಿದೆ. ಅಂತೆಯೇ ಇಂದು ವಿಚಾರಣೆ ಮುಗಿದ ನಂತರ ನಾಗೇಂದ್ರ ಅವರನ್ನು ಅರೆಸ್ಟ್ ಮಾಡೋ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಈ ಪ್ರಕರಣದಲ್ಲಿ ಎಸ್ಐಟಿ ಈವರೆಗೆ 11 ಮಂದಿಯನ್ನು ಬಂಧಿಸಿದೆ.
ಬಂಧಿತರ ಆಡಿಯೊ ಸಂಭಾಷಣೆ : SIT ತನಿಖೆ ಚುರುಕಾಗಿದ್ದು, ನಿಗಮದ MDಪದ್ಮನಾಭ ಹಾಗೂ ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಮಧ್ಯೆ ಮೇ 24ರಂದು ನಡೆದಿರುವ ರಹಸ್ಯ ಮೀಟಿಂಗ್ ವಿಡಿಯೋ-ಆಡಿಯೊ ತುಣುಕು ತನಿಖಾ ತಂಡಕ್ಕೆ ಲಭಿಸಿದ್ದು, ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ‘ಬ್ಯಾಂಕ್ನವರ ವಿರುದ್ಧ ಕೇಸ್ ಮಾಡ್ತೀವಲ್ಲ ನಮಗೆ ಹಣ ಕೊಡ್ತಾರಾ ಅವ್ರು ’ ಎಂಬ ಮಾತು ಆಡಿಯೊದಲ್ಲಿದೆ. ಮತ್ತೊಬ್ಬರು ‘ಅಧ್ಯಕ್ಷರಿಗೆ ಹೇಳೋದು ಬೇಡ್ವಾ’ ಎನ್ನುತ್ತಾರೆ. ‘ಅಧ್ಯಕ್ಷರ ಗಮನಕ್ಕೆ ತರಬೇಕು. ಗಮನಕ್ಕೆ ತಂದರೆ ದೊಡ್ಡ ರಾದ್ಧಾಂತ ಆಗುತ್ತದೆ’ ಎಂದು ಇನ್ನೊಬ್ಬರು ಹೇಳುತ್ತಾರೆ. ಆಗ ‘ಸೋಮವಾರ ಮಂಗಳವಾರ ಬುಧವಾರ ಬಿಡೋಣ. ಇವತ್ತು ಒಂದು ದಿನ ಅವರನ್ನು ಮ್ಯಾನೇಜ್ ಮಾಡಿ ಕಳಿಸಿ’ ಎಂದು ಇಬ್ಬರು ಮಾತನಾಡಿಕೊಂಡಿರುವುದು ದಾಖಲಾಗಿದೆ.
ಇದನ್ನೂ ಓದಿ : ಇಂದು SSLC ಪರೀಕ್ಷೆ-2ರ ಫಲಿತಾಂಶ ಪ್ರಕಟ : ಎಷ್ಟು ಗಂಟೆಗೆ? ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ..!