ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ವಿಚಾರಣೆ ಬಹುತೇಕ ಮುಗಿದಿದ್ದು, 3 ಬಾರಿ ಕಸ್ಟಡಿಗೆ ಪಡೆದು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಇವತ್ತು ದರ್ಶನ್ ಸೇರಿ ನಾಲ್ವರು ಆರೋಪಿಗಳ ಕಸ್ಟಡಿ ಅಂತ್ಯ ಆಗಲಿದ್ದು, ಪರಪ್ಪನ ಅಗ್ರಹಾರ ಜೈಲು ಸೇರ್ತಾರಾ ಅಥವಾ ಮತ್ತೆ ಪೊಲೀಸ್ ಕಸ್ಟಡಿಗೆ ಹೋಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ ಸೇರಿ 13 ಆರೋಪಿಗಳನ್ನು ಈಗಾಗಲೇ ಕೋರ್ಟ್ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ. ಆದ್ರೆ ಕೆಲವೊಂದು ವಿಚಾರಣೆ ಬಾಕಿ ಇದ್ದ ಕಾರಣ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಮತ್ತೆರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ಇಂದಿಗೆ ದರ್ಶನ್ ಗ್ಯಾಂಗ್ಗೆ ಕಸ್ಟಡಿ ಅಂತ್ಯ ಆಗಿದ್ದು, ನಟ ದರ್ಶನ್ 13 ವರ್ಷಗಳ ನಂತರ ಮತ್ತೆ ಜೈಲು ಸೇರ್ತಾರಾ ಎಂಬ ಪ್ರಶ್ನೆಗೆ ಇಂದು ಸಂಜೆ ಉತ್ತರ ಸಿಗಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮುಕ್ಕಾಲುಭಾಗ ಆರೋಪಿಗಳು ಈಗಾಗಲೇ ಜೈಲುಪಾಲಾಗಿದ್ದಾರೆ. ದರ್ಶನ್ ಸೇರಿ ಉಳಿದ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದ ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು ವಿಚಾರಣೆ ಮುಗಿಸಿದ್ದಾರೆ. ಮಹತ್ವದ ಸಾಕ್ಷ್ಯಾಧಾರಗಳನ್ನೂ ಕಲೆ ಹಾಕಿದ್ದಾರೆ. ಎ2 ದರ್ಶನ್, ಎ9 ಧನರಾಜ, ಎ10 ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ಶೆಡ್ ವಿನಯ್ ಹಾಗೂ ಎ14 ಗಿರಿನಗರದ ಪ್ರದೂಶ್ ಕೇಸ್ನಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದೇ ಸಾಕ್ಷ್ಯನಾಶಕ್ಕೆ ಯತ್ನಿಸಿರೋದು ಬಯಲಾಗಿದೆ. ಹೀಗಾಗಿ ಮತ್ತೆರಡು ದಿನ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ಮುಗಿಸಿದ್ದಾರೆ.
ಇಂದು ಆರೋಪಿಗಳನ್ನು ಪೊಲೀಸರು 24ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಈಗಾಗಲೇ ಸಂಪೂರ್ಣ ವಿಚಾರಣೆ ಮುಗಿದಿರೋದ್ರಿಂದ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಹೀಗಾಗಿ ನಾಲ್ವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರುವುದು ಪಕ್ಕಾ ಎನ್ನಲಾಗಿದೆ.
ಇದನ್ನೂ ಓದಿ : ಜೈಲಿನಲ್ಲಿರುವ ಪವಿತ್ರಾ ಗೌಡ ಭೇಟಿಗೆ ಆಗಮಿಸಿದ ಪೋಷಕರು – ಮಾಧ್ಯಮಗಳ ಮುಂದೆ ದರ್ಪ ಮೆರೆದ ಪವಿತ್ರಾ ಸಹೋದರ..!