ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪರಮಾಪ್ತನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಾಜು ಅಲಿಯಾಸ್ ನಾಗು ಅಲಿಯಾಸ್ ನಾಗ ಬಂಧಿತ ಆರೋಪಿ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆಸಿಕೊಂಡಿದ್ದ ಆರೋಪದಲ್ಲಿ ನಾಗರಾಜನ್ನು ಅರೆಸ್ಟ್ ಮಾಡಲಾಗಿದೆ.
ಇದೀಗ ಬಂಧನದಲ್ಲಿರುವ ನಾಗರಾಜ್ ಮೂಲತಃ ಮೈಸೂರು ನಗರದ ಟಿ.ಕೆ.ಲೇಔಟ್ ನಿವಾಸಿಯಾಗಿದ್ದು, ಪೆಟ್ರೊಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಮೂಲಕ ದರ್ಶನ್ ಆಪ್ತವಲಯಕ್ಕೆ ಎಂಟ್ರಿಯಾದ ನಾಗ ಕಳೆದ 15 ವರ್ಷಗಳಿಂದಲೂ ದರ್ಶನ್ ಜತೆಯಲ್ಲೇ ಇದ್ದು, ದರ್ಶನ್ ಊಟ, ತಿಂಡಿ, ವಾಸ್ತವ್ಯ, ಪ್ರವಾಸ, ಮೋಜು, ಮಸ್ತಿ, ವೈಯಕ್ತಿಕ ವಿಚಾರಗಳೆಲ್ಲವನ್ನೂ ನೋಡಿಕೊಳ್ಳುತ್ತಿದ್ದ.
ಇನ್ನು ದರ್ಶನ್ ಅತಿಯಾಗಿ ನಂಬುತ್ತಿದ್ದ ವ್ಯಕ್ತಿಯಲ್ಲಿ ನಾಗರಾಜ್ ಕೂಡ ಒಬ್ಬನಾಗಿದ್ದು, ಮೈಸೂರು ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ತೋಟದ ಮನೆಯ ನಿರ್ವಹಣೆ ಕೂಡ ನಾಗರಾಜ್ ಜವಾಬ್ದಾರಿಯಾಗಿತ್ತು. ದರ್ಶನ್ ಅಭಿಮಾನಿ ಸಂಘಗಳಿಗೆಲ್ಲ ನಾಗ ಸಂಪರ್ಕ ಸೇತುವೆಯಾಗಿದ್ದ. ಇದರ ಜೊತೆಗೆ ನಟ ದರ್ಶನ್ ನಾಗರಾಜ್ಗಾಗಿ ಮೈಸೂರಿನಲ್ಲಿ ಬಾರ್ ಇಟ್ಟುಕೊಟ್ಟಿದ್ದು, ವ್ಯವಹಾರ ಕೈ ಹಿಡಿಯದ ಹಿನ್ನೆಲೆ ಮತ್ತೆ ದರ್ಶನ್ ಜತೆಯಲ್ಲೇ ಓಡಾಟ ನಡೆಸುತ್ತಿದ್ದ.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ನಾಗರಾಜು ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿ ಆಯ್ಕೆಯಾಗಿದ್ದ. ಮಹಾನಗರ ಪಾಲಿಕೆ 21ನೇ ವಾರ್ಡ್ನಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ನಾಗ ದರ್ಶನ್ ಮೂಲಕವೇ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ. ಆದರೆ ಇದೀಗ ನಾಗ ರೇಣುಕಾಸ್ವಾಮಿ ಕೊಲೆನಲ್ಲಿ ಪೊಲೀಸರ ಅಥಿತಿಯಾಗಿದ್ದಾನೆ.
ಇದನ್ನೂ ಓದಿ : ರೇಣುಕಾಸ್ವಾಮಿ ಮರ್ಡರ್ಗೆ ಬರೋಬ್ಬರಿ 30 ಲಕ್ಷ ಡೀಲ್ : ಪ್ರಭಾವಿ ರಾಜಕಾರಣಿ ಬುಡಕ್ಕೂ ಬರುತ್ತಾ ಈ ಕೇಸ್?