ಮುಂಬೈ : ಮುಂಬೈಯಲ್ಲಿ ನಿನ್ನೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ರಣ ಭೀಕರ ಮಳೆಗೆ ಕಬ್ಬಿಣದ ಬೃಹತ್ ಜಾಹೀರಾತು ಫಲಕ (Bill Board) ಪೆಟ್ರೋಲ್ ಬಂಕ್ ಮೇಲೆ ಕುಸಿದು ಬಿದ್ದಿದೆ. ಪರಿಣಾಮ 14 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಘಟನೆ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ನಡೆದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸ್ಥಳಕ್ಕೆ ಆಗಮಿಸಿ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕುಸಿದು ಬಿದ್ದ ಬೃಹತ್ ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಹಲವು ಮಂದಿಯನ್ನ ಈಗಾಗಲೇ ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೆಟ್ರೋಲ್ ಬಂಕ್ ಎದುರಗಡೆ ಬೃಹತ್ ಜಾಹೀರಾತು ಫಲಕವನ್ನು ನಿಲ್ಲಿಸಲಾಗಿತ್ತು. ಕಬ್ಬಿಣದ ಬಿಲ್ ಬೋರ್ಡ್ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಕಾರುಗಳ ಮೇಲೆ ಬಿದ್ದ ಪರಿಣಾಮ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, ಜನರನ್ನು ರಕ್ಷಿಸಲು ಆದ್ಯತೆ ನೀಡಲಾಗಿದ್ದು ಗಾಯಗೊಂಡವರಿಗೆ ಸರ್ಕಾರ ಚಿಕಿತ್ಸೆ ನೀಡಲಿದೆ. ಮೃತ ಕುಟುಂಬದ ಸದಸ್ಯಕ್ಕೆ ಪರಿಹಾರ ನೀಡಲಾಗುವುದು. ಮುಂಬೈನಲ್ಲಿರುವ ಎಲ್ಲಾ ಹೋರ್ಡಿಂಗ್ಗಳನ್ನು ಪರಿಶೀಲಿಸಲು ನಾನು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯ ಸರ್ಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.
ಇನ್ನು, ಧೂಳು ಸಹಿತ ಬಿರುಗಾಳಿಯಿಂದ ಮುಂಬೈ ಏರ್ ಪೋರ್ಟ್ನಲ್ಲಿ ಕೆಲ ಕಾಲ ವಿಮಾನ ಹಾರಾಟ ಸ್ಥಗಿತ ಮಾಡಲಾಗಿತ್ತು. ಅನೇಕ ಕಡೆಗಳಲ್ಲಿ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಬೈಕ್ ಸವಾರರು, ಕಾರ್ ಡ್ರೈವರ್ಗಳಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಪೊಲೀಸರು ಸಲಹೆ ನೀಡಿದ್ದಾರೆ. ಪಶ್ಚಿಮ ರೈಲ್ವೇ ಇಲಾಖೆ ಕೂಡ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
ಇದನ್ನೂ ಓದಿ : ಇನ್ನೂ ಮೂರು ದಿನ ಬೆಂಗಳೂರು ಸೇರಿ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ..!