ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮೇಲೆ ದರ್ಶನ್ ಅಂಡ್ ಗ್ಯಾಂಗ್ ನಡೆಸಿದ ಭೀಭತ್ಸ ಕ್ರೌರ್ಯದ ಕರಾಳತೆ ಬಗೆದಷ್ಟೂ ಬಯಲಾಗುತ್ತಿದೆ. ಈ ಕೇಸ್ ತೀವ್ರ ಸಂಚಲನ ಸೃಷ್ಟಿಸಿರುವಾಗ ಪೊಲೀಸರ ತನಿಖೆಯು ಚುರುಕಾಗಿದ್ದು, ಇದೀಗ ಭೀಕರ ಹತ್ಯೆ ಕೇಸ್ನ ಮತ್ತೊಬ್ಬ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕರೆಂಟ್ ಶಾಕ್ ಕೊಟ್ಟು ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟಿದ್ದ ಎನ್ನಲಾಗಿರುವ ಮಹಾಕ್ರೂರಿ A-9 ಆರೋಪಿ ರಾಜು ಅಲಿಯಾಸ್ ಧನರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜು ಬಂಧನದ ಬಳಿಕ ಈ ಪ್ರಕರಣದ ಕ್ರೌರ್ಯತೆಯ ಇತಿಹಾಸ ಬಯಲಾಗಿದೆ. ಪವಿತ್ರಾಗೌಡಳಿಗೆ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಕೋಪಗೊಂಡು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಜೂ.8ರಂದು ತನ್ನ ಸಹಚರರ ಮೂಲಕ ಅಪಹರಿಸಿ ನಗರಕ್ಕೆ ನಟ ದರ್ಶನ್ ಕರೆಸಿದ್ದರು.
ನಂತರ ರೇಣುಕಾಸ್ವಾಮಿಯನ್ನು ನಗರದ ಪಟ್ಟಣಗೆರೆ ಶೆಡ್ಗೆ ಕರೆದೊಯ್ದು ಬರೀ ಹೊಡಿಬಡಿ ಅಷ್ಟೇ ಅಲ್ಲ, ದರ್ಶನ್ ಹಾಗೂ ಪವಿತ್ರಾಗೌಡ ಹೇಳಿದ ರೀತಿಯಲ್ಲೇ ಗ್ಯಾಂಗ್ ರೇಣುಕಾಸ್ವಾಮಿಗೆ ಕಾಲಿನಿಂದ ಫುಟ್ಬಾಲ್ನಂತೆ ಒದ್ದು, ಮರ್ಮಾಂಗ, ತಲೆ ಹಾಗೂ ಬಾಯಿ ಸೇರಿದಂತೆ ದೇಹದ ವಿವಿಧೆಡೆ ಎಲೆಕ್ಟ್ರಿಕ್ ಶಾಕ್ ನೀಡಿ ಮೃಗೀಯವಾಗಿ ವರ್ತಿಸಿದೆ. ಇದರಲ್ಲಿ ಪ್ರಮುಖವಾಗಿ ದರ್ಶನ್ ಸಮ್ಮುಖದಲ್ಲೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ A-9 ಆರೋಪಿ ರಾಜು ಶಾಕ್ ಕೊಟ್ಟು ವಿಕೃತಿ ಮೆರೆದಿದ್ದಾನೆ.
ಇಷ್ಟು ಮಾತ್ರವಲ್ಲದೇ ರೇಣುಕಾಸ್ವಾಮಿಗೆ ಮೆಗ್ಗರ್ ಡಿವೈಸ್ ಬಳಸಿ ಕರೆಂಟ್ ಶಾಕ್ ನೀಡಿದ ಗ್ಯಾಂಗ್ ಕೈ-ಕಾಲುಗಳನ್ನು ಹಿಡಿದು ಜೋಲಿಯಾಡಿ, ದೊಣ್ಣೆ, ಮರದ ತುಂಡುಗಳು ಹಾಗೂ ಹಗ್ಗದಿಂದ ಹೊಡೆದು ಮನಬಂದಂತೆ ಚಿತ್ರಹಿಂಸೆ ನೀಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಹ ಮರ್ಮಾಂಗದ ಬಳಿ ರಕ್ತದ ಕಲೆಗಳು ಹಾಗೂ ತಲೆಯೊಳಗೆ ರಕ್ತಸ್ರಾವವಾಗಿ ಹೆಪ್ಟುಗಟ್ಟಿದ್ದು ಪತ್ತೆಯಾಗಿತ್ತು. ಪೋಸ್ಟ್ಮಾರ್ಟಂನಲ್ಲಿ ಕಂಡ ಕೆಲ ಗಾಯದ ಗುರುತುಗಳು, ನರಕಾಸುರರ ಸತ್ಯಗಳ ಅನಾವರಣ ಮಾಡಿತ್ತು.
ಇದನ್ನೂ ಓದಿ : ಒಂದು ವಾರದ ನಂತರ ವಿಚಾರಣೆಯಲ್ಲಿ ಸ್ಫೋಟಕ ರಹಸ್ಯ ಬಾಯ್ಬಿಟ್ಟ ‘ಡಿ’ ಗ್ಯಾಂಗ್ : ಏನದು?