ಬೆಂಗಳೂರು : ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠ ನಾಯಕರ ಸಭೆ ಇಂದು ಆಯೋಜನೆಗೊಂಡಿದ್ದು, ಲೋಕಸಭಾ ಕ್ಷೇತ್ರಗಳಲ್ಲಿ ಯಾವ ರೀತಿಯ ಹೊಂದಾಣಿಕೆ ಇರಬೇಕು, ಪ್ರಚಾರ ಕಾರ್ಯದಲ್ಲಿ ಪರಸ್ಪರ ಭಾಗಿಯಾಗುವ ಬಗೆ ಹೇಗೆ ಎನ್ನುವ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ.
ಗುರುವಾರವಷ್ಟೇ ಬೆಂಗಳೂರಿಗೆ ಸೀಮಿತವಾಗಿ ಉಭಯ ಪಕ್ಷಗಳ ನಾಯಕರ ಸಮನ್ವಯ ಸಭೆ ನಡೆದ ಬೆನ್ನಲ್ಲೇ ಇಂದು ರಾಜ್ಯಮಟ್ಟದಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಚರ್ಚಿಸಲು ಸಮನ್ವಯ ಸಭೆ ಕರೆಯಲಾಗಿದೆ. ಬೆಳಗ್ಗೆ 11.00ರಿಂದ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಯಲಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ, ರಾಜ್ಯ ಬಿಜೆಪಿ ವರಿಷ್ಠ ನಾಯಕ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎರಡು ಪಕ್ಷದ ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿ-ಜೆಡಿಎಸ್ ಒಟ್ಟಾಗಿ ಪ್ರಚಾರ, ರಣತಂತ್ರ ರೂಪಿಸಲು ಇಂದು ಮಹತ್ವದ ಚರ್ಚೆ ನಡೆಯಲಿದ್ದು, ಮೈತ್ರಿಗಾಗಿ ಎರಡೂ ಪಕ್ಷಗಳ ಮುಖಂಡರ ಸಮನ್ವಯ ಸಮಿತಿ ರಚನೆ ಮಾಡುವ ಸಾಧ್ಯತೆಯಿದೆ. 28 ಕ್ಷೇತ್ರಗಳಲ್ಲೂ ಗೆಲುವಿನ ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದ್ದು, ಮೈತ್ರಿ ಸಮಾವೇಶ ಹಾಗೂ ಕಾರ್ಯಕ್ರಮ ಆಯೋಜನೆ ಬಗ್ಗೆ ಮಾತುಕತೆ ಸಾಧ್ಯತೆಯಿದೆ.
ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿಡಿ ನೇತೃತ್ವದಲ್ಲಿ ಬೃಹತ್ ಸಮಾವೇಶಕ್ಕೆ ಪ್ಲಾನ್ ನಡೆಯಲಿದ್ದು, ಇಂದೇ ಜಂಟಿ ಸಮಾವೇಶಕ್ಕೆ ಡೇಟ್ ಫಿಕ್ಸ್ ಮಾಡುವ ಸಾಧ್ಯತೆಯಿದೆ.
ಮೈತ್ರಿ ನಂತರ ಬಿಜೆಪಿಗೆ 25 ಸ್ಥಾನ ಜೆಡಿಎಸ್ಗೆ 3 ಸ್ಥಾನ ಹಂಚಿಕೆಯಾಗಿದೆ. ಅದರಂತೆ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಹಾಸನ ಸೇರಿದಂತೆ ಕೆಲವು ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಅಂತರವಿದೆ. ಮೈತ್ರಿಗೆ ವಿರೋಧವೂ ವ್ಯಕ್ತವಾಗಿದೆ. ಅಲ್ಲದೆ ಬಿಜೆಪಿ ನಾಯಕರು ಪ್ರಚಾರ ಕಾರ್ಯ ಸೇರಿದಂತೆ ಚುನಾವಣಾ ಪ್ರಕ್ರಿಯೆಗಳಲ್ಲಿ ಜೆಡಿಎಸ್ ಅನ್ನು ಕಡೆಗಣಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ಸಭೆಯಲ್ಲಿ ಮುಖಂಡರು ಆಪಾದಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇರುವ ಗೊಂದಲ ಸರಿಪಡಿಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫ್ ಸ್ಪೋಟ ಪ್ರಕರಣ – ದಾಳಿಯ ಪ್ರಮುಖ ಸಂಚುಕೋರ ಅರೆಸ್ಟ್..!