ಮಂಡ್ಯ : ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳು ಮತ್ತು ಜಾಗೃತಿ ವಹಿಸಿದರೂ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲ. ಇದೀಗ ಸಕ್ಕರೆನಾಡಲ್ಲಿ ಮತ್ತೊಂದು ಭ್ರೂಣ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯದ ಪಾಂಡವಪುರದ ಹೆಲ್ತ್ ಕ್ವಾಟ್ರಸ್ನಲ್ಲಿ ಆಸ್ಪತ್ರೆ ಹೊರಗುತ್ತಿಗೆ ನೌಕರರಾಗಿರುವ ಆನಂದ್, ಅಶ್ವಿನಿ ದಂಪತಿಗಳು ಮೈಸೂರು ಮೂಲದ ಮಹಿಳೆಗೆ ಭ್ರೂಣ ಹತ್ಯೆ ಮಾಡಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಹೆಲ್ತ್ ಕ್ವಾಟ್ರಸ್ ಮೇಲೆ ಮಂಡ್ಯ DHO ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಭ್ರೂಣ ಹತ್ಯೆಗೆ ಔಷಧಿ ನೀಡಿದ್ದರು ಎನ್ನಲಾದ ಆನಂದ್ ಮತ್ತು ಅಶ್ವಿನಿಯನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಈಗಾಗಲೇ 2 ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮೈಸೂರಿನ ಮಹಿಳೆ, 3ನೇ ಮಗು ಹೆಣ್ಣು ಎಂದು ತಿಳಿದು ಅಬಾರ್ಷನ್ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ. ನಿನ್ನೆ ತಡರಾತ್ರಿ ಹೆಲ್ತ್ ಕ್ವಾಟ್ರಸ್ ಮನೆಯಲ್ಲಿ ಅಬಾರ್ಷನ್ಗೆ ತಯಾರಿ ನಡೆಸುತ್ತಿದ್ದರು. ಅಧಿಕಾರಿಗಳು ದಾಳಿ ಮಾಡುವ ವೇಳೆಗೆ ಗರ್ಭಿಣಿ ಗರ್ಭಪಾತದ ಔಷಧಿ ಸೇವಿಸಿದ್ದರು. ಅದರೆ ರೆಡ್ ಹ್ಯಾಂಡಾಗಿ ಆರೋಪಿಗಳನ್ನು ಹಿಡಿದ್ರೂ ಮಗುವಿನ ಜೀವ ಉಳಿಸಲು ಆಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರಾಜ್ಯದಲ್ಲಿ 2ನೇ ಹಂತದ ವೋಟಿಂಗ್ : ಬೆಂಗಳೂರು-ಉತ್ತರ ಕರ್ನಾಟಕದ ಈ ಜಿಲ್ಲೆಗಳಿಗೆ ವಿಶೇಷ ರೈಲುಗಳ ವ್ಯವಸ್ಥೆ..!