ವಿಜಯಪುರ : ಲವ್ ಮಾಡಿದ್ದಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಢವಳಗಿ ಗ್ರಾಮದ ರಾಹುಲ್ ಬಿರಾದಾರ ಸ್ಥಿತಿ ಗಂಭೀರವಾಗಿದ್ದು, ಮುದ್ದೆಬಿಹಾಳದ ಬಿಇ ವಿದ್ಯಾರ್ಥಿನಿ ಪೋಷಕರ ವಿರುದ್ಧ ಆರೋಪ ಕೇಳಿಬಂದಿದೆ. ವಿಜಯಪುರದ ಮುದ್ದೇಬಿಹಾಳ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.
ರಾಹುಲ್ನನ್ನು ಮನೆಗೆ ಕರೆಸಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆರೋಪ ವ್ಯಕ್ತವಾಗಿದೆ. ಎರಡು ವರ್ಷದ ಹಿಂದೆ ಯುವತಿ ಜೊತೆ ಪ್ರೇಮ ಮುರಿದಿತ್ತು, ನಂತರ ಎರಡೂ ಮನೆಯವರು ರಾಜಿ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಯುವತಿ ಫೋಟೋಗಳು ರಾಹುಲ್ ಬಳಿಯಿತ್ತು, ಮದ್ವೆ ಆಗಲು ಒಪ್ಪದಿದ್ರೆ ಫೋಟೋ ವೈರಲ್ ಮಾಡೋದಾಗಿ ರಾಹಲ್ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಮೇ 26ರಂದು ರಾಹುಲ್ನನ್ನು ಪೋಷಕರು ಯುವತಿ ಮನೆಗೆ ಕರೆಸಿದ್ದರು. ಈ ವೇಳೆ ರಾಡ್ನಿಂದ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ರಾಹುಲ್ ತಂದೆ ರಾಮನಗೌಡ ಬಿರಾದಾರ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ರಾಹುಲ್ಗೆ ಟ್ರೀಟ್ಮೆಂಟ್ ನಡೆಯುತ್ತಿದ್ದು, ರಾಹುಲ್ಗೆ ಶೇ.70ರಷ್ಟು ಸುಟ್ಟಗಾಯಗಳಾಗಿದೆ. ಯುವತಿಯ ಪೋಷಕರು ಕೊಲೆ ಯತ್ನವನ್ನು ನಿರಾಕರಿಸಿದ್ದಾರೆ. ಆತನೇ ಬೆಂಕಿ ಹಚ್ಕೊಂಡು ಬೆದರಿಸಲು ಪ್ರಯತ್ನಿಸಿದ್ದ, ಬಿಡಿಸಲು ಹೋದ ನಮಗೂ ಗಾಯವಾಗಿದೆ ಎಂದು ಯುವತಿ ತಂದೆ ಹೇಳಿಕೆ ನೀಡಿದ್ದಾರೆ. ಕೊಲೆ ಯತ್ನದ ಕೇಸ್ ದಾಖಲಿಸಿ ಮುದ್ದೆಬಿಹಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಭವಾನಿ ರೇವಣ್ಣ ಬೇಲ್ ಅರ್ಜಿ ಭವಿಷ್ಯ ಇಂದೇ ನಿರ್ಧಾರ..!