ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಸಂಜೆ ಚಿರತೆ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ನಿನ್ನೆ ಸಂಜೆ 6.40ರ ಸುಮಾರಿಗೆ ಕವಿವಿ ಪತ್ರಿಕೋದ್ಯಮ ವಿಭಾಗದ ಬಳಿ ಚಿರತೆ ಕಾಣಿಸಿಕೊಂಡಿದೆ.
ಸಂಶೋಧನಾ ವಿದ್ಯಾರ್ಥಿ ಪ್ರತ್ಯಕ್ಷವಾಗಿ ಚಿರತೆಯನ್ನು ನೋಡಿದ್ದು, ರಸ್ತೆಯಲ್ಲಿ ಜಿಗಿದು ಗಾಂಧಿ ಭವನದ ಹಿಂಭಾಗದಿಂದ ಬೊಟಾನಿಕಲ್ ಗಾರ್ಡ್ನ ಒಳಗೆ ಓಡಿ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿಯೂ ಸೆರೆಯಾಗಿದೆ. ವಿದ್ಯಾರ್ಥಿಗಳು ತಕ್ಷಣ ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಗೂ ಸಂದೇಶ ರವಾನಿಸಿದ್ದಾರೆ. ಒಂದೆರಡು ಬಾರಿ ಧಾರವಾಡ ಹೊರ ವಲಯದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ಆವರಣಕ್ಕೇ ಬಂದಿರೋದು ಆತಂಕಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ದೃಶ್ಯ ನೋಡಿ ಕ್ಯಾಂಪಸ್ನಲ್ಲಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ವಿದ್ಯಾರ್ಥಿಗಳು, ಭೋದಕ ಹಾಗೂ ಬೋಧಕೇತರ ಸಿಬ್ಬಂದಿ ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ಇದೇ ಚಿರತೆ ಕಾಣಿಸಿಕೊಂಡ ರಸ್ತೆಯಲ್ಲಿ ನ್ಯೂ ಬಾಯ್ಸ್ ಹಾಸ್ಟೆಲ್ ವಿದ್ಯಾರ್ಥಿಗಳು, ಪತ್ರಿಕೋದ್ಯಮ, ಎಂಸಿಎ ವಿದ್ಯಾರ್ಥಿಗಳು, ಕನಕ ಭವನ ಹಾಗೂ ಗ್ರಂಥಾಲಯಕ್ಕೆ ಹೋಗುವವರು ಅಡ್ಡಾಡುತ್ತಾರೆ. ಸದ್ಯ ಎಲ್ಲರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ಹೊರಡಿಸಲಾಗಿದೆ.
ಇದನ್ನೂ ಓದಿ : ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ, ಸಡಗರ – ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ಬಂದ್..!