ಬಿಡದಿ : ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಇಂದು ಬೆಳಗ್ಗೆ ಬಿಡದಿ ತೋಟದ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದರು.
ಮುಖ್ಯಮಂತ್ರಿಗಳೇ ಮರ ಕಡಿಸಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ ಸಿಂಹ ಅವರಿಗೆ ಸೇರಿದ ಜಾಗದಲ್ಲಿ ಹಾಕುವಂತೆ ಅರಣ್ಯಾಧಿಕಾರಿಗಳಿಗೆ ಹೇಳಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಅನಗತ್ಯವಾಗಿ ಪ್ರತಾಪ್ ಸಿಂಹ ಅವರ ಸಹೋದರನ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ ಎಂಬುದು ಹೊರಗೆ ಬರಬೇಕು ಎಂದು ಆಗ್ರಹಿಸಿದ್ದರು. ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ಕುಮಾರಣ್ಣನವರಿಗೆ ಪ್ರತಾಪ್ ಸಿಂಹ ಪಾದ ಮುಟ್ಟಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ ಸರ್ಕಾರಿ ಜಮೀನಿನಲ್ಲಿದ್ದ 126 ಮರಗಳನ್ನು ಅಕ್ರಮವಾಗಿ ಕಡಿದ ಆರೋಪ ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹ ಮೇಲಿತ್ತು. ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪ ಹಿನ್ನೆಲೆ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು.
ಮರಗಳನ್ನು ಅಕ್ರಮವಾಗಿ ಕಡಿದಿರುವ ಆರೋಪದ ಮೇರೆಗೆ ಅವರ ವಿರುದ್ಧ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಆಧರಿಸಿ ಅವರನ್ನು ವಶಕ್ಕೆ ಪಡೆಯಲು ವಿಕ್ರಂ ಅವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಆದರೆ, ವಿಕ್ರಂ ಅವರು ತಲೆಮರೆಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು.
ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಅರಣ್ಯಾಧಿಕಾರಿಗಳಿಗೆ, ಅವರು ಬೆಂಗಳೂರಿನಲ್ಲಿ ಇರುವ ಕುರಿತಾಗಿ ಮಾಹಿತಿ ಸಿಕ್ತಿತ್ತು. ಹಾಗಾಗಿ, ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದು ಅವರನ್ನು ಬೆಂಗಳೂರಿನಲ್ಲೇ ಇರುವ ಜಾರುಬಂಡೆ ಕಾವಲ್ ನಲ್ಲಿರುವ ಅರಣ್ಯ ಕೇಂದ್ರದಲ್ಲಿ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು.
ಕಾಯ್ದೆ ಉಲ್ಲಂಘನೆಯೇ ಬಂಧನಕ್ಕೆ ಕಾರಣ : ಯಾರೇ ಆಗಲೀ ಮರಗಳನ್ನು ಕಡಿಯುವಂತಿಲ್ಲ. ಮರಗಳನ್ನು ಕತ್ತರಿಸಲು ಸೂಕ್ತವಾದ ಕಾರಣಗಳು ಬೇಕು ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಕಡ್ಡಾಯ. ಆದರೆ, ಅನುಮತಿಯನ್ನು ಪಡೆಯದೇ, ಜಮೀನಿನ ಮಾಲೀಕರಿಗೂ ತಿಳಿಸದೇ ಸ್ವಯಂಪ್ರೇರಿತವಾಗಿ ಮರಗಳನ್ನು ಕತ್ತರಿಸಿದ್ದಾರೆಂದು ಅವರ ವಿರುದ್ದ ದೂರು ದಾಖಲಾಗಿತ್ತು. ದೂರಿನ ಆಧಾರದಲ್ಲಿ ಹಾಸನ ಜಿಲ್ಲೆಯ ಅರಣ್ಯಾಧಿಕಾರಿಗಳು ವಿಕ್ರಂ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ, ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಆಗಿನಿಂದಲೂ ವಿಕ್ರಂ ಅವರು ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದೆ. ಪದೇ ಪದೇ ನೋಟಿಸ್ ಜಾರಿಗೊಳಿಸಿದ್ದರೂ ವಿಕ್ರಂ ಅವರು ವಿಚಾರಣೆಗೆ ಸ್ಪಂದಿಸಿರಲಿಲ್ಲ.
ಇನ್ನೂ ಪ್ರತಾಪ್ ಸಿಂಹ ಕುಮಾರಸ್ವಾಮಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಮೈಸೂರು-ಕೊಡಗು ಕ್ಷೇತ್ರವನ್ನು ಜೆಡಿಎಸ್ ಮೈತ್ರಿ ವೇಳೆ ಬಿಜೆಪಿ ಬಳಿ ಡಿಮ್ಯಾಂಡ್ ಇಡುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಭೇಟಿಯಾಗಿ ಸಹಕಾರ ಕೇಳಿದ್ದಾರೆ.
ಇದನ್ನೂ ಓದಿ : ಮೂವರು ಕೇಂದ್ರ ಸಚಿವರ ಮರು ಸ್ಪರ್ಧೆಗೆ ಭಾರೀ ವಿರೋಧ..