ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ, ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್. ಆದರೆ ದಶಕಗಳ ಕಾಲ ಕನ್ನಡ ಚಿತ್ರರಂಗದ ಮೇರುನಟಿಯಾಗಿ ಮಿಂಚಿದ್ದ ಮಿನುಗುತಾರೆ ಕಲ್ಪನಾ ಬೆಳಗಾವಿಯ ಗೋಟೂರ್ ಪ್ರವಾಸ ಮಂದಿರದಲ್ಲಿ ಕೊನೆಯುಸಿರೆಳೆದಿದ್ದರು. ಇದಾದ ಬಳಿಕ ಕಲ್ಪನಾ ಅಗಲಿದ ಬಂಗಲೆಯಲ್ಲಿ ಇದುವರೆಗೂ ಯಾರೂ ವಾಸಿಸುತ್ತಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿರಲಿಲ್ಲ.
ಆದರೆ, ಕಲ್ಪನಾ ಅವರ ಕುರಿತದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಅವರು ಕೂಡ ಕಲ್ಪನಾ ಅವರು ಮೃತಪಟ್ಟಿದ್ದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರಂತೆ. ಆಗ ಅಲ್ಲಿ ನಡೆದ ಕೆಲ ವಿಚಿತ್ರ ಹಾಗೂ ಭಯಾನಕ ಅನುಭವವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಪ್ರವಾಸಿ ಮಂದಿರದಲ್ಲಿ ತಮಗಾದ ಅನುಭವವನ್ನು ಬಿಚ್ಚಿಟ್ಟ ಅವರು, ಜನತಾ ಪಾರ್ಟಿಯಲ್ಲಿ ನಾನಿದ್ದೆ…ನಾನು ನಾಗರಾಜ್ ಮೂರ್ತಿ ಕಾರು ತೆಗೆದುಕೊಂಡು ಬೆಳಗಾವಿಗೆ ಹೋಗಿದ್ದೆವು…ಬರುವಾಗ ಈ ಐಬಿ ತಲುಪಿದವು. ರಾತ್ರಿ 11.30 ಆಗಿತ್ತು ಅಲ್ಲಿ ಹೆಚ್ಚು ಜನ ಬರುತ್ತಿರಲಿಲ್ಲ. ಅಲ್ಲಿ ದೂರದಲ್ಲಿ ಓರ್ವ ಬೀಡಿ ಸೇದುತ್ತಾ ಇದ್ದ. ಅಲ್ಲಿದ್ದ ವ್ಯಕ್ತಿಯೊಬ್ಬರನ್ನು ನಾಗರಾಜ್ ಮೂರ್ತಿ ಕರೆದರು. ಆತ ನಮ್ಮ ಬಳಿ ಬಂದ. ಪ್ರವಾಸಿ ಮಂದಿರದ ಬೀಗ ತೆಗೆಯಿರಿ ಎಂದು ಕೇಳಿದೆವು. ಆದರೆ, ಆತ ಇಲ್ಲಿಂದ 30 ಕಿ.ಮೀ ದೂರದಲ್ಲಿ ಬೇರೊಂದು ಪ್ರವಾಸಿ ಮಂದಿರವಿದೆ. ನೀವು ಅಲ್ಲಿಗೆ ಹೋಗಿ ಎಂದು ಸತಾಯಿಸಿದ್ದ. ಆದರೂ ನಾವು ಆತನ ಮಾತನ್ನು ಲೆಕ್ಕಿಸದೆ ಈ ಪ್ರವಾಸಿ ಮಂದಿರದಲ್ಲೇ ಉಳಿದುಕೊಂಡೆವು.
ನಿದ್ರೆಗೆ ಜಾರಿ ಕೆಲ ಹೊತ್ತಷ್ಟೇ ಆಗಿತ್ತು. ಇದ್ದಕ್ಕಿದ್ದಂತೆ ಅಲ್ಲಿ ನನ್ನ ಸುತ್ತಮುತ್ತ ಯಾರೋ ನಕ್ಕಂತೆ ಸದ್ದು ಕೇಳಿಸಿತು. ಅದೊಂದು ಕೆಟ್ಟದಾದ ನಗು. ಕೂಡಲೇ ನಾನು ಎಚ್ಚರಗೊಂಡು ನಾಗರಾಜಮೂರ್ತಿಯನ್ನು ಎಚ್ಚರಿಸಿದೆ. ಯಾಕೋ ಇಲ್ಲಿರುವುದು ಬೇಡ ಎಂದು ಹೇಳಿದೆ. ಆದರೆ, ನಾಗರಾಜಮೂರ್ತಿ ಒಪ್ಪಲಿಲ್ಲ. ಮತ್ತೆ ಕೆಲ ನಿಮಿಷಗಳ ನಂತರ ಅಲ್ಲಿ ಗೆಜ್ಜೆ ಸದ್ದು ಕೇಳಿಸಿತು. ಇಬ್ಬರಿಗೂ ಭಯವಾಗಿ ಅಲ್ಲಿಂದ ಹೊರಟೆವು.
ನಂತರ ಅಲ್ಲಿ ಕೆಲಸಕ್ಕಿದ್ದ ವ್ಯಕ್ತಿ, ʼಕಲ್ಪನಾ ಅವರು ಸಾವನ್ನಪ್ಪಿದ ದಿನದಿಂದಲೂ ಇಲ್ಲಿ ಇದೇ ರೀತಿಯ ಸಮಸ್ಯೆಗಳಾಗುತ್ತಿದ್ದು, ದಯವಿಟ್ಟು ಇಲ್ಲಿಂದ ಹೊರಟು ಹೋಗಿ ಎಂದು ಹೇಳಿದರು. ಇದೆಲ್ಲ ಭ್ರಮೆಯಲ್ಲಿ ಆಗಿದ್ದೋ? ನಿಜವಾಗಿ ಆಗಿದ್ದೋ ಗೊತ್ತಿಲ್ಲ. ಆದರೆ, ನಮಗೆ ಈ ಅನುಭವ ಆಗಿದ್ದಂತೂ ನಿಜʼ ಎಂದು ಮುಖ್ಯಮಂತ್ರಿ ಚಂದ್ರು ಆ ದಿನದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಟನೆಯ ‘ರಣಾಕ್ಷ’ ಚಿತ್ರದ ಟ್ರೈಲರ್ ರಿಲೀಸ್..!