ಹುಬ್ಬಳ್ಳಿ : ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹಲ್ಲೆ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದು, ನ್ಯಾಯ ದಕ್ಕಿಸಿಕೊಡುವಂತೆ ಪ್ರಹ್ಲಾದ್ ಜೋಶಿ ಅವರಲ್ಲಿ ದಂಪತಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಹ್ಲಾದ ಜೋಶಿ ಮಾತನಾಡಿ, ಇಂತಹ ಘಟನೆ ನಡೆಯಬಾರದಿತ್ತು, ಇದು ಖಂಡನೀಯ ವಿಚಾರ, ನಿಮ್ಮ ಜೊತೆಯಲ್ಲೇ ಈ ತರಹದ ಘಟನೆ ನಡೆದಿದಲ್ಲಿ ಸಾಮಾನ್ಯ ಜನರ ಕಥೆ ಏನಾದೀತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಿಮ್ಮ ಸುರಕ್ಷತೆಯ ಬಗ್ಗೆ ನೀವು ಚಿಂತಿಸಬೇಡಿ ಕೇಂದ್ರ ಸರ್ಕಾರ ನಿಮ್ಮೊಂದಿಗಿದೆ ಎಂದು ಭರವಸೆ ನೀಡಿದ್ದಾರೆ. ಚುನಾವಣೆ ಮುಗಿದ ಕೂಡಲೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಒಂದು ಶಾಶ್ವತವಾದ ಸೂಕ್ತ ಪರಿಹಾರ ಕಂಡು ಹಿಡಿಯುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಘಟನೆಯ ಹಿನ್ನಲೆ : ನಟಿ ಹರ್ಷಿಕಾ ಪೂಣಚ್ಚ ದಂಪತಿಗಳು ರಾತ್ರಿ ವೇಳೆ ಬೆಂಗಳೂರಿನ ಫ್ರೇಜರ್ ಟೌನ್ ಬಳಿಯ ರೆಸ್ಟೋರೆಂಟ್ನಲ್ಲಿ ಊಟ ಮುಗಿಸಿ ಹೊರ ಬರುತ್ತಿದ್ದರು. ಈ ಸಂದರ್ಭ 25-30 ಕ್ಕೂ ಹೆಚ್ಚು ಜನರ ಗುಂಪು ಕನ್ನಡದಲ್ಲಿ ಮಾತನಾಡಬೇಡಿ ಎಂದು ಕಿರಿಕ್ ತೆಗೆದು ಹರ್ಷಿಕಾ ಮತ್ತು ಪತಿ ಭುವನ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆದ ಕೂಡಲೇ ಹರ್ಷಿಕಾ ಪೂಣಚ್ಚ ಆರ್.ಆರ್.ನಗರ ಇನ್ಸ್ಪೆಕ್ಟರ್ಗೆ ಕರೆ ಮಾಡಿ ಮಾಡಿದ್ದಾರೆ. ಈ ವೇಳೆ ಅವಾಜ್ ಹಾಕಿದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಘಟನೆಯ ಬಗ್ಗೆ ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮಗಾದ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. ‘ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ’ ಎಂದು ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ : ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ..!