ನವದೆಹಲಿ : ಭಾರತಕ್ಕೆ ಟಿ20 ವಿಶ್ವಕಪ್ ಚಾಂಪಿಯನ್ ವೀರರ ಆಗಮನವಾಗಿದೆ. 3 ದಿನ ತಡವಾಗಿ ಭಾರತಕ್ಕೆ ಎಂಟ್ರಿಕೊಟ್ಟ ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇನ್ನು ಬಾರ್ಬಡೋಸ್ನಂತೆ ಭಾರತದಲ್ಲಿ ಸಂಭ್ರಮ ಮರುಸೃಷ್ಟಿಯಾಗಲಿದ್ದು, ಅದಕ್ಕೆ ಕೌಂಟ್ಡೌನ್ ಶುರುವಾಗಿದೆ.
ಬೆರಿಲ್ ಚಂಡಮಾರುತದ ಪರಿಣಾಮ ಕಳೆದ ಮೂರು ದಿನಗಳಿಂದ ಟೀಂ ಇಂಡಿಯಾ ವೆಸ್ಟ್ಇಂಡೀಸ್ನ ಬಾರ್ಬಡೊಸ್ನಲ್ಲಿ ಉಳಿದುಕೊಂಡಿತ್ತು. ಬಿಸಿಸಿಐ ವಿಶೇಷ ಮುತುವರ್ಜಿ ವಹಿಸಿ ಚಾರ್ಟರ್ಡ್ ಫ್ಲೈಟ್ ಮೂಲಕ ಆಟಗಾರರನ್ನ ದೇಶಕ್ಕೆ ಕರೆತಂದಿದೆ. ಇಂದು ಬೆಳಿಗ್ಗೆ 6 ಗಂಟೆಗೆ ರೋಹಿತ್ & ಟೀಮ್ ದೆಹಲಿಗೆ ಬಂದಿಳಿದಿದೆ.
ಬೆಳಗಿನ ಜಾವ ಭಾರತಕ್ಕೆ ಆಗಮಿಸಿದ ವಿಶ್ವ ಗೆದ್ದ ವೀರ ಕಲಿಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿದಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ವಿಜೇತ ತಂಡದ ಜೊತೆ ಉಪಹಾರ ಕೂಟವನ್ನ ಹಮ್ಮಿಕೊಂಡಿದ್ದಾರೆ. ಇದು ಮುಗಿಯುತ್ತಿದ್ದಂತೆ ಇಡೀ ತಂಡ ಮುಂಬೈನತ್ತ ಪ್ರಯಾಣ ಬೆಳೆಸಲಿದೆ.
4 ಗಂಟೆಗೆ ದೆಹಲಿಯಿಂದ ಮುಂಬೈಗೆ ಆಗಮನ – ದೆಹಲಿಯಿಂದ ನಾಲ್ಕು ಗಂಟೆಗೆ ಹೊರಡುವ ಟೀಮ್ ಇಂಡಿಯಾ ಆಟಗಾರರು ನೇರವಾಗಿ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. 5 ಗಂಟೆ ವೇಳೆಗೆ ಮರೀನ್ ಡ್ರೈವ್ಗೆ ಎಂಟ್ರಿಕೊಡಲಿದ್ದಾರೆ. ವಿಶ್ವಕಪ್ ಜಯಿಸಿ ಬಾರ್ಬಡೋಸ್ನಲ್ಲಿ ಸಂಭ್ರಮಾಚರಣೆ ಮಾಡಿದ್ದ ರೋಹಿತ್ ಪಡೆ ಭಾರತದಲ್ಲೂ ಸಂಭ್ರಮಿಸಲಿದೆ. ಮರೀನ್ ಡ್ರೈವ್ನಿಂದ ವಾಂಖೆಡೆ ಮೈದಾನದ ತನಕ ತೆರೆದ ಬಸ್ನಲ್ಲಿ ಮೆರವಣಿಗೆ ನಡೆಯಲಿದೆ. ಸುಮಾರು 2 ಗಂಟೆಗಳ ಕಾಲ ಮೆರವಣಿಗೆ ಸಾಗಲಿದ್ದು, ಆಟಗಾರರು ಟ್ರೋಫಿ ಜೊತೆ ಈ ಸಂಭ್ರಮದಲ್ಲಿ ಮುಳುಗಲಿದ್ದಾರೆ.
ಈ ಬಗ್ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ‘ಬನ್ನಿ ಸಂಭ್ರಮಿಸೋಣ’ ಎಂದು ಅಭಿಮಾನಿಗಳಿಗೆ ಟ್ವೀಟ್ ಮೂಲಕ ಆಹ್ವಾನಿಸಿದ್ದಾರೆ. “ನಾನು ವಿಶೇಷವಾದ ಕ್ಷಣವನ್ನ ನಿಮ್ಮೊಂದಿಗೆ ಸಂಭ್ರಮಿಸಲು ಬಯಸುತ್ತೇವೆ. ಈ ಗೆಲುವನ್ನ ಮರೀನ್ ಡ್ರೈವ್ನಿಂದ ವಾಂಖೆಡೆವರೆಗೆ ಗೆಲುವಿನ ಯಾತ್ರೆಯ ಮೂಲಕ ಸಂಭ್ರಮಿಸೋಣ. ಇಂದು ಸಂಜೆ 5 ಗಂಟೆಯಿಂದ. ಟ್ರೋಫಿ ಮನೆಗೆ ಬರುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಇನ್ನು ಓಪನ್ ಬಸ್ ಪರೇಡ್ ಬಳಿಕ ಐಕಾನಿಕ್ ವಾಂಖೆಡೆ ಮೈದಾನದಲ್ಲಿ ಅವಿಸ್ಮರಣೀಯ ಸಮಾರಂಭ ನಡೆಯಲಿದೆ. ಈ ವೇಳೆ ವಿಶ್ವಕಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಟೀಮ್ ಇಂಡಿಯಾ ಆಟಗಾರರು, ಕೋಚಸ್ ಹಾಗೂ ಸಪೋರ್ಟಿಂಗ್ ಸ್ಟಾಪ್ಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನವನ್ನ ವಿತರಿಸಲಿದೆ.
ಇದನ್ನೂ ಓದಿ : 4 ವರ್ಷ ಸ್ಮಶಾನದಲ್ಲಿ ಕಳೆದಿದ್ದ ಈ ಕನ್ನಡಿಗ ಇಂದು ಟೀಂ ಇಂಡಿಯಾದ ಬೆನ್ನೆಲುಬು – ಥ್ರೋಡೌನ್ ಸ್ಪೆಷಲಿಸ್ಟ್ನ ರೋಚಕ ಸ್ಟೋರಿಯಿದು..!