ಬೆಂಗಳೂರು : ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಕರ್ನಾಟಕದಲ್ಲಿ 1,400 ಹೂಡಿಕೆಗೆ ಮುಂದಾಗಿದ್ದಾರೆ. ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಮುರಳೀಧರನ್ ಅವರು ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್ ಹೆಸರಿನ ತಂಪು ಪಾನೀಯಗಳ ಉತ್ಪಾದನಾ ಘಟಕವನ್ನು ಚಾಮರಾಜನಗರದ ಬದನಗುಪ್ಪೆಯಲ್ಲಿ ತೆರೆಯಲಿದ್ದಾರೆ. ಇದಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಕೂಡ ಮಾಡಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಮುರಳೀಧರನ್ ಧಾರವಾಡ ಜಿಲ್ಲೆಯಲ್ಲಿ ಹೂಡಿಕೆ ಮಾಡಲಿದ್ದಾರೆ.
ಕರ್ನಾಟಕದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಈ ಒಪ್ಪಂದದ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಚಾಮರಾಜನಗರ ಜಿಲ್ಲೆಯ ಬದನಗುಪ್ಪೆಯಲ್ಲಿ ಕಾರ್ಖಾನೆ ಸ್ಥಾಪನೆ ಕಾಮಗಾರಿ ನಡೆಯುತ್ತಿದೆ. ಎಂ.ಬಿ.ಪಾಟೀಲ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಮುರಳೀಧರನ್ ಮತ್ತು ಅವರ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯ ನಂತರ ಮಾಡಿದ ಪೋಸ್ಟ್ನಲ್ಲಿ, ಮುತ್ತಯ್ಯ ಮುರಳೀಧರನ್ ಕರ್ನಾಟಕದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸಿದ್ದಾರೆ. ತಮ್ಮ ತಾಯ್ನಾಡಿನಲ್ಲಿ ತಮ್ಮ ವ್ಯಾಪಾರವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಅವರು ಇದಕ್ಕಾಗಿ ತಮ್ಮ ರಾಜ್ಯವನ್ನು ಆಯ್ಕೆ ಮಾಡಿದ್ದಾರೆ.
ಚಾಮರಾಜನಗರ ಹೊರತುಪಡಿಸಿ ಧಾರವಾಡ ಜಿಲ್ಲೆಯಲ್ಲೂ ಬಂಡವಾಳ ಹೂಡಿಕೆ ಹೆಚ್ಚಿಸಲು ಮುರಳೀಧರನ್ ಉತ್ಸುಕರಾಗಿದ್ದಾರೆ. ಸದ್ಯ ಚಾಮರಾಜನಗರದಲ್ಲಿ 1000 ಕೋಟಿ ವೆಚ್ಚದ ಕಾರ್ಖಾನೆ ಸ್ಥಾಪನೆ ಕಾಮಗಾರಿ ನಡೆಯುತ್ತಿದೆ. ಧಾರವಾಡದಲ್ಲೂ ಹೂಡಿಕೆ ಆಗುವುದರಿಂದ ರಾಜ್ಯಕ್ಕೆ ಒಟ್ಟು 1400 ಕೋಟಿ ರೂ. ಬಂಡವಾಳ ಹರಿದುಬರುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈಗಾಗಲೇ 46 ಎಕರೆ ಭೂಮಿಯನ್ನು ತಂಪು ಪಾನೀಯ ಉತ್ಪಾದನೆಗೆ ಮಂಜೂರು ಮಾಡಲಾಗಿದ್ದು, ಆ ಜಮೀನಿನಲ್ಲಿ ಕಾರ್ಖಾನೆ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. 2025ರ ಜನವರಿ ವೇಳೆಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ : ತಪ್ಪೊಪ್ಪಿಕೊಂಡ ದರ್ಶನ್ಗೆ ಮತ್ತಷ್ಟು ಸಂಕಷ್ಟ – ಡಿ ಗ್ಯಾಂಗ್ ವಿರುದ್ಧ ಮತ್ತೆ 8 ಸೆಕ್ಷನ್ ಸೇರ್ಪಡೆ..!